ಜನಪ್ರಿಯ ಹಾಡಿನ ಸಾಲೊಂದನ್ನು ಶೀರ್ಷಿಕೆಯಾಗಿಡುವುದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಚಾಲ್ತಿಯಲ್ಲಿದೆ. ರಾಜಕುಮಾರ್ ಅಭಿನಯದ ‘ಕಸ್ತೂರಿ ನಿವಾಸ’ ಸಿನಿಮಾದ ‘ಆಡಿಸಿ ನೋಡು ಬೀಳಿಸಿ ನೋಡು’ ಎಂಬ ಹಾಡಿನ ಸಾಲನ್ನೇ ಶೀರ್ಷಿಕೆಯಾಗಿಸಿಕೊಂಡು ಸಿನಿಮಾ ಮಾಡಹೊರಟಿದೆ ಹೊಸಬರ ತಂಡ.
ಇತ್ತೀಚೆಗೆ ನಟ ಧನಂಜಯ್ ಈ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡಿದರು.
‘ಹೊಸಬರೇ ಇರುವ, ಹೊಸತನದಿಂದ ಕೂಡಿರುವ ‘ಆಡಿಸಿ ನೋಡು ಬೀಳಿಸಿ ನೋಡು’ ಕನ್ನಡದ ಪ್ರೇಕ್ಷಕರನ್ನು ನಿರಾಸೆಗೊಳಿಸುವುದಿಲ್ಲ. ಇದೊಂದು ವಿನೂತನ ಪ್ರಯತ್ನ. ಚಿತ್ರದ ಎಲ್ಲಾ ಹಾಡುಗಳು ಕೇಳಲು ಹಿತವಾಗಿವೆ. ಸುಲಭವಾಗಿ ಎಲ್ಲರ ಮನಗಳಲ್ಲಿ ನೆಲೆ ನಿಲ್ಲುವಂತಿದೆ’ ಎಂದು ನಟ ಧನಂಜಯ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮನುಗೌಡ ಈ ಚಿತ್ರಕ್ಕೆ ಹಣ ಹೂಡಿದ್ದಾರೆ. ‘ಇದು ನಾಯಕಿ ಪ್ರಧಾನ ಚಿತ್ರ. ಹಾಗಾಗಿ ಇದನ್ನು ನಾವು ಸವಾಲಾಗಿ ಸ್ವೀಕರಿಸಿ ಚಿತ್ರೀಕರಿಸಿದ್ದೇವೆ. ಸುಮಾರು ನಾಲ್ಕು ಶೆಡ್ಯೂಲ್ನಲ್ಲಿ ಚಿತ್ರೀಕರಿಸಲಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿಯೇ ಚಿತ್ರಿಕರಿಸಲಾಗಿದೆ’ ಎಂದು ಅವರು ವಿವರಣೆ ನೀಡಿದರು.
ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು ಜೂನ್ ತಿಂಗಳಲ್ಲಿ ತೆರೆಯ ಮೇಲೆ ತರುವ ಯೋಚನೆ ತಂಡಕ್ಕಿದೆ. ಎಂ.ಎಸ್.ಎಚ್. ಈ ಚಿತ್ರದ ನಿರ್ದೇಶಕರು. ಕಥೆ - ಚಿತ್ರಕಥೆ - ಸಂಗೀತ - ಸಾಹಿತ್ಯ - ಛಾಯಾಗ್ರಹಣ- ಎಡಿಟಿಂಗ್ - ವಿಎಫ್ಎಕ್ಸ್ ಎಫೆಕ್ಟ್ಸ್ ವಿಭಾಗಗಳಲ್ಲಿಯೂ ಅವರೇ ಕಾರ್ಯ ನಿರ್ವಹಿಸಿದ್ದಾರೆ.
‘ಈ ಎಲ್ಲಾ ವಿಭಾಗಗಳ ಕಾರ್ಯವನ್ನು ನಾನು ಕೇವಲ 15 ದಿನಗಳ ಅವಧಿಯಲ್ಲಿ ಕಲಿತು ಈ ಚಿತ್ರದಲ್ಲಿ ಅದನ್ನು ಅಳವಡಿಸಿದ್ದೇನೆ. ನಿರ್ಮಾಪಕರು ಚಲನಚಿತ್ರಕ್ಕೆ ಅಗತ್ಯವಿರುವ ಎಲ್ಲ ಸಲಕರಣೆಗಳನ್ನು ನನ್ನ ಬೇಡಿಕೆಗೆ ತಕ್ಕಂತೆ ನೀಡಿದ್ದಾರೆ. ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಚಿತ್ರಗಳ ಸಾಲಿಗೆ ಇದು ಸೇರುತ್ತದೆ. ಹಾಸ್ಯ, ಸಸ್ಪೆನ್ಸ್ ಹಾಗೂ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಈ ಚಿತ್ರ ಕನ್ನಡ ಚಿತ್ರರಂಗದ ಮೈಲಿಗಲ್ಲು ಆಗುವುದರಲ್ಲಿ ಸಂದೇಹವೇ ಇಲ್ಲ’ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ತಾರಾಗಣದಲ್ಲಿ ಆದರ್ಶ್ ಈಶ್ವರಪ್ಪ, ಸೋಮು, ಮಂಜುನಾಥ್, ಯೋಗರಾಜ್, ಸುನಿಲ್ ಗೌಡ, ವೆಂಕಟ್ ಶೆಟ್ಟಿ, ಅಭಿಜಿತ್ ಪುರೋಹಿತ್, ಮೋಹನ್ ಗೌಡ, ನಿಸರ್ಗ ಬಿ.ಎನ್. ಕಾವ್ಯ ಗೌಡ ದ್ದಾರೆ. ಸಂಗೀತವನ್ನು ನಿವೇದ್ ಸೆಲ್ವಂ ಹಾಗೂ ಸಚಿನ್ ಬಗ್ಲಿ ಸಂಯೋಜಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.