ಈಜಿಪ್ಟ್– ಗಾಜಾದಿಂದ ವಿಶ್ವಸಂಸ್ಥೆ ಸೇನೆ ವಾಪಸಿಗೆ ಆಜ್ಞೆ
ವಿಶ್ವರಾಷ್ಟ್ರ ಸಂಸ್ಥೆ, ಮೇ 19– ಸಂಯುಕ್ತ ಅರಬ್ ಗಣರಾಜ್ಯ ಮತ್ತು ಗಾಜಾ ಪ್ರದೇಶಗಳಿಂದ ವಿಶ್ವ ರಾಷ್ಟ್ರ ಸಂಸ್ಥೆಯ ಜರೂರು ಸೇನೆಯು ವಾಪಸಾಗಬೇಕೆಂದು ವಿಶ್ವ ರಾಷ್ಟ್ರ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಉ ಥಾಂಟ್ರವರು ಆಜ್ಞೆ ಮಾಡಿದ್ದಾರೆ.
ಮಧ್ಯಪ್ರಾಚ್ಯದಲ್ಲಿರುವ ವಿಶ್ವರಾಷ್ಟ್ರ ಸಂಸ್ಥೆಯ ಜರೂರು ಸೇನೆಯ ದಂಡ ನಾಯಕರಾದ ಭಾರತದ ಮೇಜರ್ ಜನರಲ್ ಇಂದರ್ಜಿತ್ ರಿಖೈ ಅವರಿಗೆ ಥಾಂಟ್ ನಿನ್ನೆ ರಾತ್ರಿ ಈ ಆಜ್ಞೆಯನ್ನು ಕಳುಹಿಸಿದರು.
ಬ್ಯಾಂಕುಗಳ ರಾಷ್ಟ್ರೀಕರಣ ಪಿ.ಎಸ್.ಪಿ. ಆಗ್ರಹ
ಬೆಂಗಳೂರು, ಮೇ 19– ಬ್ಯಾಂಕುಗಳ ಮತ್ತು ಜನರಲ್ ವಿಮಾ ಕಂಪೆನಿಗಳ ರಾಷ್ಟ್ರೀಕರಣಕ್ಕೆ ಕರೆ ನೀಡುವ ನಿರ್ಣಯವೊಂದನ್ನು ಪಿ.ಎಸ್.ಪಿ.ಯ ಜನರಲ್ ಕೌನ್ಸಿಲ್ ತನ್ನ ಇಂದಿನ ಕೊನೆಯ ದಿನದ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಿತು.
ಘೇರಾವೋಗಳಿಂದ ಕೈಗಾರಿಕಾ ಪ್ರಗತಿಗೆ ಧಕ್ಕೆಯಿಲ್ಲ: ಇ.ಎಂ.ಎಸ್.
ಕಲ್ಕತ್ತಾ, ಮೇ 19– ಘೇರಾವೋ ಚಳವಳಿಗಳಿಂದ ಕೈಗಾರಿಕಾ ಪ್ರಗತಿ ನಿಧಾನವಾಗುವುದೆನ್ನುವುದನ್ನು ತಾವು ಒಪ್ಪುವುದಿಲ್ಲವೆಂದು ಕೇರಳದ ಮುಖ್ಯಮಂತ್ರಿ ಶ್ರೀ ಇ.ಎಂ.ಎಸ್. ನಂಬೂದ್ರಿಪಾದ್ ಅವರು ಇಂದು ಇಲ್ಲಿ ತಿಳಿಸಿದರು.
ಕಾರ್ಮಿಕರು ಮೊದಲ ಬಾರಿ ಮುಷ್ಕರಗಳನ್ನು ಪ್ರಾರಂಭಿಸಿದಾಗ ಕೈಗಾರಿಕೆಗಳ ಪ್ರಗತಿ ಹಾಳಾಗುವುದೆಂದು ಮಾಲೀಕರು ದೊಡ್ಡ ಕೂಗೆಬ್ಬಿಸಿದರು. ಆದರೆ ಬೇರೆ ರೀತಿ ಪರಿಣಾಮವುಂಟಾಯಿತು ಎಂದರು.