ನಮ್ಮ ರಾಜಕೀಯ ನಾಯಕರು, ಸಿನಿಮಾ ನಟರು, ಕನ್ನಡ ಹೋರಾಟಗಾರರು ಸಭೆ–ಸಮಾರಂಭ, ಟಿ.ವಿ. ಸಂದರ್ಶನಗಳಲ್ಲಿ ರಾಜ್ಯದ ಕನ್ನಡಿಗರ ಸಂಖ್ಯೆ ಆರು ಕೋಟಿ, ಆರೂವರೆ ಕೋಟಿ, ಏಳು ಕೋಟಿ ಎಂದೆಲ್ಲ ಹೇಳುತ್ತ, ಎಲ್ಲರೂ ತಮ್ಮ ಬೆನ್ನಿಗಿದ್ದಾರೆ ಎಂದು ಬಡಾಯಿ ಕೊಚ್ಚುತ್ತಿರುತ್ತಾರೆ.
ಒಬ್ಬ ರಾಜಕಾರಣಿ ಚುನಾವಣೆಯಲ್ಲಿ ಕೆಲವು ಸಾವಿರ ಮತ ಪಡೆದು ಗೆದ್ದಾಗಲೂ, ‘ಏಳು ಕೋಟಿ ಕನ್ನಡಿಗರ ಆಶೀರ್ವಾದ ನನ್ನ ಮೇಲೆ ಇದ್ದುದರಿಂದ ಈ ಫಲಿತಾಂಶ ಬರಲು ಸಾಧ್ಯವಾಯಿತು’ ಎನ್ನುತ್ತಾನೆ. ಚಿತ್ರನಟರು ಹಾಗೂ ಚಳವಳಿಗಾರರಂತೂ ನಿರಂತರವಾಗಿ ಇದೇ ಮಾತನ್ನಾಡುತ್ತಿರುತ್ತಾರೆ.
ನನ್ನ ಅನುಮಾನವೆಂದರೆ; ಕರ್ನಾಟಕದಲ್ಲಿರುವವರೆಲ್ಲ ಹೇಗೆ ಕನ್ನಡಿಗರಾಗುತ್ತಾರೆ? ಹಾಗೊಮ್ಮೆ ಅದು ನಿಜವೇ ಆಗಿದ್ದಿದ್ದರೆ ಭಾಷಾ ಗಲಭೆಗಳು ಏಕೆ ಸಂಭವಿಸುತ್ತಿದ್ದವು? ರಾಜ್ಯದ ಒಳಗೇ ಇನ್ನಿಲ್ಲದಂತೆ ಕನ್ನಡ ಭಾಷಾ ದ್ವೇಷ ಮತ್ತು ಅನ್ಯಭಾಷಾ ಮೋಹ ತೀವ್ರಗೊಳ್ಳುತ್ತಿರುವುದೇಕೆ?
–ಎನ್. ನರಹರಿ, ಬೆಂಗಳೂರು