ಚಿತ್ರದುರ್ಗ: ಆಡಳಿತಾತ್ಮಕ ಹಾಗೂ ತಾಂತ್ರಿಕ ಸಮಸ್ಯೆಗಳಿಂದಾಗಿ ಎರಡು ಗ್ರಾಮಗಳಲ್ಲಿ ಅನುಷ್ಠಾನಗೊಳ್ಳದಿರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯನ್ನು ಶೀಘ್ರದಲ್ಲೇ ಕೈಗೆತ್ತಿ ಕೊಂಡು ಅನುಮೋದನೆ ಕೊಡಿಸಲು ಶಿಫಾರಸು ಮಾಡಲಾಗುತ್ತದೆ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಪ್ರಗತಿ ಪರಿಶೀಲನಾ ಸಮಿತಿ ಅಧ್ಯಕ್ಷ ಎಸ್.ಜಿ. ನಂಜಯ್ಯನಮಠ ಭರವಸೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯ ನಂತರ ಸುದ್ದಿಗೋಷ್ಠಿ ಯಲ್ಲಿ ಅವರು ಮಾತನಾಡಿದರು.
‘ಚಿತ್ರದುರ್ಗ ಜಿಲ್ಲೆಯ 5 ಗ್ರಾಮ ಗಳನ್ನು ಬಹು ಗ್ರಾಮ ಕುಡಿಯುವ ನೀರಿನ ಯೋಜನೆಗೆ ಆಯ್ಕೆ ಮಾಡಲಾ ಗಿದೆ. ಒಂದು ಯೋಜನೆ ಪೂರ್ಣ ಗೊಂಡಿದೆ. 5 ಮೂರು ಪ್ರಗತಿಯಲ್ಲಿದೆ. ಹಿರಿಯೂರು ತಾಲ್ಲೂಕು ಜನವ ಗೊಂಡನಹಳ್ಳಿ ಹಾಗೂ ರೇವಲಕುಂಟೆ ಯಲ್ಲಿ ತಾಂತ್ರಿಕ ಮತ್ತು ಆಡಳಿತಾತ್ಮಕ ಸಮಸ್ಯೆಯಿಂದಾಗಿ ಯೋಜನೆ ಅನುಷ್ಠಾನ ವಾಗಿಲ್ಲ. 2006–07ರಲ್ಲಿ ಯೋಜನೆ ಮಂಜೂರಾಗಿದ್ದ, ಅನುಷ್ಠಾನವಾಗಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಈ ವೇಳೆ ಸುದ್ದಿಗಾರರು, ‘ಇಷ್ಟು ವರ್ಷವಾದರೂ ಅನುಷ್ಠಾನಗೊಳ್ಳದ ಈ ಯೋಜನೆ ಬಗ್ಗೆ ಇಲ್ಲಿಯವರೆಗೂ ಒಂದೇ ಒಂದು ಬಾರಿಯೂ ಜಿಲ್ಲಾ ಪಂಚಾ ಯ್ತಿಯ ಮಾಸಿಕ ಕೆಡಿಪಿ, ಸಾಮಾನ್ಯ ಸಭೆ, ಜಾಗೃತಿ ಸಮಿತಿ ತ್ರೈಮಾಸಿಕ ಸಭೆಗಳಲ್ಲಿ ಪ್ರಸ್ತಾಪವಾಗಿಲ್ಲ’ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನಂಜಯ್ಯಮಠ, ‘ಇದಕ್ಕೆ ಕಾರಣ ಗೊತ್ತಿಲ್ಲ. ಆದರೆ ಶೀಘ್ರದಲ್ಲೇ ಆ ಎರಡು ಹಳ್ಳಿಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲು ನಮ್ಮ ಸಮಿತಿ ಜವಾಬ್ದಾರಿ ತೆಗೆದುಕೊಳ್ಳಲಿದೆ’ ಎಂದು ಭರವಸೆ ನೀಡಿದರು.
‘ಜಿಲ್ಲೆಗೆ 575 ಶುದ್ಧ ಕುಡಿಯುವ ನೀರಿನ ಘಟಕಗಳು ಮಂಜೂರಾಗಿವೆ. 557 ಘಟಕಗಳು ಅನುಷ್ಠಾನಗೊಂಡಿವೆ. ಏಳು ಘಟಕಗಳು ದುರಸ್ತಿಯಲ್ಲಿವೆ’ ಎಂದು ಅಂಕಿ ಅಂಶ ನೀಡಿದರು. ಜಿಲ್ಲೆಯಲ್ಲಿ 72 ಸಾವಿರ ವೈಯಕ್ತಿಕ ಶೌಚಾಲಯಗಳನ್ನು ನಿರ್ಮಿಸುವ ಗುರಿ ಹೊಂದಲಾಗಿದೆ. 38 ಸಾವಿರ ನಿರ್ಮಾಣವಾಗಿವೆ. ಅಕ್ಟೋಬರ್ 2 ರ ಹೊತ್ತಿಗೆ 38 ಜಿಲ್ಲೆಯ 115 ಗ್ರಾಮ ಗಳಿಗೆ 521 ಟ್ಯಾಂಕರ್ಗಳ ಮೂಲಕ ಪ್ರತಿದಿನ ನೀರು ಸರಬರಾಜು ಮಾಡಲಾ ಗುತ್ತಿದೆ. 25 ಖಾಸಗಿ ಬೋರ್ವೆಲ್ ಗಳಿಂದ ನೀರು ಪಡೆಯಲಾಗುತ್ತಿದೆ. ಇದರಲ್ಲಿ 10 ಮಂದಿ ಉಚಿತವಾಗಿ ನೀರು ಪೂರೈಸುತ್ತಿದ್ದಾರೆ. ಅವರನ್ನು ಈ ಸಂದರ್ಭದಲ್ಲಿ ತುಂಬು ಹೃದಯದಿಂದ ಅಭಿನಂದಿಸುತ್ತೇನೆ’ ಎಂದರು.
‘ಮಳೆಯ ಕೊರತೆ ಹೀಗೆ ಮುಂದುವರಿದರೆ, ಟ್ಯಾಂಕರ್ ಮೂಲಕ ನೀರು ಪೂರೈಕೆ ಹೆಚ್ಚಿಸಲಾಗುತ್ತದೆ. ಅದಕ್ಕಾಗಿ ಜಿಲ್ಲೆಯಲ್ಲಿ 600
ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಲಾಗಿದೆ’ ಎಂದು ಮಾಹಿತಿ ನೀಡಿದರು.
‘ಶೌಚಾಲಯ ಅಭಿಯಾನ ನಡೆಸಿ...’
ಚಿತ್ರದುರ್ಗ: ‘ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮತ್ತು ಸದಸ್ಯರು ಒಂದೊಂದು ಗ್ರಾಮಗಳನ್ನು ಆಯ್ಕೆ ಮಾಡಿಕೊಂಡು, ಗ್ರಾಮ ವಾಸ್ತವ್ಯ ಮಾಡಿ, 3 ದಿನಗಳ ಶೌಚಾಲಯ ಅಭಿಯಾನ ನಡೆಸಬೇಕು’ ಎಂದು ’ ಎಂದು ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಭೌತಿಕ ಪ್ರಗತಿ ಪರಿಶೀಲನಾ ಸಮಿತಿ ಅಧ್ಯಕ್ಷ ನಂಜಯ್ಯಮಠ ಸಲಹೆ ನೀಡಿದರು.
ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಭೌತಿಕ ಪ್ರಗತಿ ಪರಿಶೀಲನಾ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಗ್ರಾಮ ವಾಸ್ತವ್ಯದ ಮೂಲಕ ಮಹಿಳೆಯರು ಮತ್ತು ಜನರಲ್ಲಿ ಅರಿವು ಮೂಡಿಸಿ ಶೌಚಾಲಯ ನಿರ್ಮಿಸಿಕೊಳ್ಳಲು ಪ್ರಚಾರ ಮಾಡಬೇಕು.
ಮುಧೋಳ ತಾಲ್ಲೂಕು ಶಿರೋಳ ಗ್ರಾಮದಲ್ಲಿ ಇಂಥ ಪ್ರಯತ್ನ ನಡೆದಿದೆ’ ಎಂದು ಉದಾಹರಿಸಿದರು.
ಸಮಿತಿ ಸದಸ್ಯ ಕೊಪ್ಪಳ ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ಜನಾರ್ದನ್, ‘ಗ್ರಾಮ ಪಂಚಾಯ್ತಿ ಮಟ್ಟದಲ್ಲಿ ಘನತ್ಯಾಜ್ಯ ವಿಲೇವಾರಿ ಅಗತ್ಯವಾಗಿದೆ. 15 ಕಿ.ಮೀ ವ್ಯಾಪ್ತಿಯಲ್ಲಿರುವ ನಾಲ್ಕೈದು ಪಂಚಾಯ್ತಿಗಳು ಸೇರಿ ಒಂದು ಕಡೆ ಘನ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಿಕೊಳ್ಳಬಹುದು. ಇದರಿಂದ ನಿರ್ವಹಣಾ ವೆಚ್ಚ, ಶ್ರಮ, ಘಟಕ ಸ್ಥಾಪನೆ ವೆಚ್ಚವೂ ಉಳಿಯುತ್ತದೆ. ಇಂಥದ್ದೊಂದು ಪ್ರಯತ್ನ ಕೊಪ್ಪಳ ಜಿಲ್ಲೆ ಹುಲಗಿ ಗ್ರಾಮದಲ್ಲಿ ಆಗಿದೆ. ಆ ಮಾದರಿಯನ್ನು ಇಲ್ಲಿಯ ಜಿಲ್ಲಾ ಪಂಚಾಯ್ತಿ ಸದಸ್ಯರು ಬಂದು ನೋಡಿದ್ದಾರೆ’ ಎಂದು ಸಲಹೆ ನೀಡಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯಬಸವರಾಜನ್, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾಮಗಾರಿಗಳ ಭೌತಿಕ ಪ್ರಗತಿ ಪರಿಶೀಲನಾ ಸಮಿತಿ ಸದಸ್ಯರಾದ ಆರ್.ಎಸ್.ತಿಪ್ಪೇಸ್ವಾಮಿ (ನೇತಾಜಿ), ಎಂ.ಎಂ.ನದಾಫ್, ರಾಜು ಮಿಡಿಗೇಶಿ, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿತೇಶ್ ಪಾಟೀಲ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.