ಗಜೇಂದ್ರಗಡ: ‘ಕಳೆದ ಒಂದು ವಾರದಿಂದ ಜನರಿಗೆ ಸರಿಯಾಗಿ ಪಡಿತರ ಸಿಗುತ್ತಿಲ್ಲ. ನ್ಯಾಯ ಬೆಲೆ ಅಂಗಡಿಯವರು ಸರ್ವರ್ ಸಮಸ್ಯೆ ಹೇಳುತ್ತಿದ್ದಾರೆ. ಆದ್ದರಿಂದ ನ್ಯಾಯ ಬೆಲೆ ಅಂಗಡಿಗಳಲ್ಲಿರುವ ಬಯೋಮೆಟ್ರಿಕ್ ಪದ್ದತಿ ಕೈಬಿಡಬೇಕು’ ಎಂದು ಒತ್ತಾಯಿಸಿ ಜಯಕರ್ನಾಟಕ ಸಂಘಟನೆ ಸದಸ್ಯರು ಶುಕ್ರವಾರ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
‘ಪಡಿತರ ಚೀಟಿ ಹೊಂದಿದ ಗ್ರಾಹಕರು ಬಯೋಮೆಟ್ರಿಕ್ ಪದ್ಧತಿ ಯಿಂದ ಸಂಕಷ್ಟ ಅನುಭವಿಸುತ್ತಿದ್ದಾರೆ. ಇಲ್ಲಿರುವ ಈ ವ್ಯವಸ್ಥೆಯಲ್ಲಿ 40 ವರ್ಷ ಮೇಲ್ಪಟ್ಟವರು, ವೃದ್ದರು, ಅಂಗವಿಕಲರು ಮತ್ತು ದಿನಗೂಲಿ ಕಾರ್ಮಿಕರ ಹೆಬ್ಬಟ್ಟನ್ನು ಅದು ಗುರುತಿಸುತ್ತಿಲ್ಲ.
ಇದರಿಂದ ಜನರು ದುಡಿಯುವದನ್ನು ಬಿಟ್ಟು ಇಲ್ಲಿ ಕಾಲಹರಣ ಮಾಡುವ ಪರಸ್ಥಿತಿ ಉಂಟಾಗಿದೆ. ಪಡಿತರ ವಿತರಣೆ ವ್ಯವಸ್ಥೆಯನ್ನು ಮೊದಲಿನಂತೆ ಸರಳೀಕರಣಗೊಳಿಸಬೇಕು. ಇಲ್ಲದಿದ್ದರೆ ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸುತ್ತೇವೆ’ ಎಂದು ಸಂಘಟನೆ ಎಚ್ಚರಿಕೆ ನೀಡಿದೆ.
ಸಂಘಟನೆ ಸದಸ್ಯರು ಪಟ್ಟಣದ ಪ್ರಮುಖ ಬೀದಿಯಲ್ಲಿ ಸಂಚರಿಸಿ ಕಾಲಕಾಲೇಶ್ವರ ವೃತ್ತಕ್ಕೆ ಬಂದು ಅಲ್ಲಿ ವಿಶೇಷ ತಹಶೀಲ್ದಾರ ಕಚೇರಿಯ ಕಂದಾಯ ನಿರೀಕ್ಷಕ ವೀರಣ್ಣ ಅಡಗತ್ತಿ ಅವರಿಗೆ ಮನವಿ ಸಲ್ಲಿಸಿದರು.
ರೋಣ ತಾಲ್ಲೂಕು ಜಯಕರ್ನಾಟಕ ಸಂಘಟನೆಯ ಅಧ್ಯಕ್ಷ ಭೀಮಣ್ಣ ಇಂಗಳೆ, ರಫೀಕ್ ತೊರಗಲ್,ಜಗದೀಶ ಮಡಿವಾಳರ, ರಮೇಶ ಮಡಿವಾಳರ, ಸಂಗಪ್ಪ ಪಂತಂಗರಾಯ, ತಿರುಪತಿ ಕುರಿ, ದೇವಪ್ಪ ಬಡಿಗೇರ, ಗುರುರಾಜ ಸಂಗಳದ, ಮಂಗಳೇಶ ಹಾಳಕೇರಿ, ಸುರೇಶ ಹಾಳಕೇರಿ, ಶಶಿಧರ ಗೌಡರ, ರಣಜೀತ ಮೋಹಿತೆ ಇತರರು ಇದ್ದರು.