ಯಾದಗಿರಿ: ನಗರದ ಜಿಲ್ಲಾ ನ್ಯಾಯಾಲಯ ಹಾಗೂ ಸ್ಟೇಷನ್ ಏರಿಯಾಗಳಲ್ಲಿ ಅಕ್ರಮವಾಗಿ ತಂಬಾಕು ಉತ್ಪನ್ನ ಮಾರಾಟ ಮಾಡುತ್ತಿದ್ದ ಕಿರಾಣಿ ಅಂಗಡಿ ಮತ್ತು ಪಾನ್ಶಾಪ್ಗಳ ಮೇಲೆ ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ವಿವಿಧ ಇಲಾಖೆಯ ಸಿಬ್ಬಂದಿ ದಾಳಿ ನಡೆಸಿ, ₹1,650 ದಂಡ ವಿಧಿಸಿದ್ದಾರೆ.
ಜಿಲ್ಲಾ ಸರ್ವೇಕ್ಷಣಾ ಅಧಿಕಾರಿಗಳು ಹಾಗೂ ಜಿಲ್ಲಾ ಆಹಾರ ಸಂರಕ್ಷಣಾ ಅಧಿಕಾರಿ ಡಾ.ಲಕ್ಷ್ಮಿಕಾಂತ ಅವರ ಆದೇಶದ ಮೇರೆಗೆ ಸಿಬ್ಬಂದಿ ಕೋಟ್ಪಾ ಕಾಯ್ದೆ-2003ರ ಅಡಿಯಲ್ಲಿ ದಾಳಿ ನಡೆಸಿದ್ದಾರೆ. ದಾಳಿ ವೇಳೆ 15 ಪ್ರಕರಣಗಳನ್ನು ದಾಖಲಿಸಿದ್ದಾರೆ.
ಜಿಲ್ಲಾ ಸಲಹೆಗಾರರಾದ ಮಹಾಲಕ್ಷ್ಮಿ ಸಜ್ಜನ ಮಾತನಾಡಿ, ‘ಜಿಲ್ಲೆಯಲ್ಲಿ ತಂಬಾಕು ಮಾರಾಟ ಕಾನೂನುಬಾಹಿರವಾಗಿ ನಡೆಯುತ್ತಿದೆ. ಅಂಗಡಿಗಳು ಮತ್ತು ಪಾನ್ಶಾಪ್ಗಳು ವಿಶೇಷವಾಗಿ ತಂಬಾಕು ಉತ್ಪನ್ನಗಳನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಮಕ್ಕಳಿಗೆ ಕಾಣುವ ಹಾಗೆ ಮಾರಾಟ ಮಾಡಬಾರದು’ ಎಂದು ಸಲಹೆ ನೀಡಿದರು.
‘ಒಂದು ವೇಳೆ ಮಾರುವುದು ಕಂಡು ಬಂದಲ್ಲಿ ಕಾನೂನಿನ ಪ್ರಕಾರ ದಂಡ ಹಾಗೂ ಕ್ರಮ ಜರುಗಿಸಲಾಗುವುದು’ ಎಂದು ಎಚ್ಚರಿಸಿದರು.
ದಾಳಿಯ ಸಂದರ್ಭದಲ್ಲಿ ನಗರ ಪೊಲೀಸ್ ಠಾಣೆಯ ಪಿಎಸ್ಐ ಸುನಿಲ ಮೂಲಿಮನಿ, ಮುಖ್ಯಪೇದೆ ಜನಾರ್ಧನ ರೆಡ್ಡಿ ಹಾಗೂ ತಂಬಾಕು ನಿಯಂತ್ರಣ ಕೋಶದ ಸಿಬ್ಬಂದಿ ನಟರಾಜ, ಆಪ್ತ ಸಮಾಲೋಚಕ ಮಾಸ್ಟರ್ ಫಿಲೀಪ್ ಹಾಜರಿದ್ದರು.