ಮತ್ತೊಂದು ಗೋಡೆಯಲ್ಲಿ ಸಾಹು ಮಹಾರಾಜ್, ಮಹಾದೇವ ಗೋವಿಂದ ರಾನಡೆಯಂತಹ ಮಹಾಪುರುಷರ ಪಟಗಳಲ್ಲದೆ, ಜೋತಿಬಾ ರಚಿಸಿರುವ ‘ಗುಲಾಮಗಿರಿ’, ‘ಛತ್ರಪತಿ ಶಿವಾಜಿಯವರ ಜೀವನ ಚರಿತ್ರೆ’, ‘ಸಾರ್ವಜನಿಕ ಸತ್ಯ ಧರ್ಮ ಪುಸ್ತಕ’, ‘ರೈತನ ಚಾವಟಿ’ ಮುಂತಾದ ಪುಸ್ತಕಗಳ ರಕ್ಷಾಪುಟಗಳು ಮತ್ತು ಅವರ ಮರಾಠಿ ಮತ್ತು ಇಂಗ್ಲಿಷ್ ಕೈಬರಹಗಳು ಮತ್ತೊಂದು ಗೋಡೆಯನ್ನು ಅಲಂಕರಿಸಿವೆ.
ಆ ಕಾಲದಲ್ಲಿ ಅಸ್ಪೃಶ್ಯರನ್ನು ಜ್ಞಾನವಂಚಿತರನ್ನಾಗಿ ಮಾಡುವುದಷ್ಟೇ ಅಲ್ಲ, ಬದುಕಿಗೆ ಅಗತ್ಯವಾದ ಮತ್ತು ಕುಡಿಯಲು ಬೇಕಾದ ನೀರನ್ನು ಅವರು ಸ್ವತಃ ತಾವೇ ತೆಗೆದು ಕುಡಿಯುವಂತಿರಲಿಲ್ಲ. ಇಂತಹ ಸಂಕಟಮಯ ಪರಿಸ್ಥಿತಿಯಲ್ಲಿ ಸಾರ್ವಜನಿಕವಾಗಿ ಎಲ್ಲರ ಬಳಕೆಗೂ ಮುಕ್ತವಾದ ಕುಡಿಯುವ ನೀರಿನ ತೊಟ್ಟಿಯನ್ನು ಫುಲೆಯವರು ಕಟ್ಟಿಸಿದ್ದರು.
ಕ್ಷಾಮಕಾಲದ ಸಂಕಟದಲ್ಲಿ ಜನ ನೀರಿಗಾಗಿ ತತ್ತರಿಸುತ್ತಿದ್ದಾಗ, ತಮ್ಮ ಮನೆಯ ಅಂಗಳದಲ್ಲಿದ್ದ ಬಾವಿಯಿಂದ ನೀರು ತೆಗೆದುಕೊಳ್ಳಲು ಅಸ್ಪೃಶ್ಯರಿಗೆ ಪ್ರವೇಶ ಕಲ್ಪಿಸಿದ್ದರು. ಫುಲೆ ದಂಪತಿಗಳ ಈ ಔದಾರ್ಯದ ಕ್ರಿಯೆಯನ್ನು ನೆನಪಿಸುವ ಸೇದುವ ನೀರಿನ ಬಾವಿಯೊಂದು ಮನೆಯ ಆವರಣದಲ್ಲಿ ಈಗಲೂ ಸಾಕ್ಷಿಯಾಗಿ ನಿಂತಿದೆ.
ಮನೆ ಪುಟ್ಟದಾಗಿದ್ದರೂ ಹೊರಗೆ ಕಾಂಪೌಂಡಿನಲ್ಲಿ ವಿಶಾಲವಾದ ಜಾಗವಿದೆ. ಇಲ್ಲಿಯೇ ಫುಲೆಯವರು ‘ಸತ್ಯಶೋಧಕ ಸಮಾಜ’ದ ಸಭೆಗಳನ್ನು ನಡೆಸುತ್ತಿದ್ದರಂತೆ. ಮನೆಯ ಹಿಂದುಗಡೆ ಫುಲೆಯವರ ಸಮಾಧಿ ಇದೆ. ಮರಣಕಾಲದಲ್ಲಿ ಜೋತಿಬಾ ತಮ್ಮನ್ನು ಮನೆಯ ಹಿಂದೆ ಒಂದು ಗುಂಡಿಯಲ್ಲಿ ಉಪ್ಪಿನೊಡನೆ ಹೂಳಬೇಕೆಂದು ವಿನಂತಿಸಿಕೊಂಡಿದ್ದರು. ಇದಕ್ಕಾಗಿ ಅವರ ಮನೆಯ ಹಿಂದೆ ಒಂದು ಗುಂಡಿಯನ್ನೂ ತೋಡಿದ್ದರು.
ಆದರೆ ಪುರಸಭೆಯವರು ವಸತಿ ಪ್ರದೇಶದಲ್ಲಿ ಸಮಾಧಿ ಮಾಡಲು ಅನುಮತಿ ನಿರಾಕರಿಸಿದ್ದರು. ಆಗ ವಿಧಿಯಿಲ್ಲದೆ, ಹೊರಗೆ ಅವರ ದೇಹಕ್ಕೆ ಅಗ್ನಿಸ್ಪರ್ಶ ಮಾಡಿ ಅಂತ್ಯಕ್ರಿಯೆ ನಡೆಸಿದ ನಂತರ, ಅಸ್ಥಿಗಳನ್ನು ಸಂಗ್ರಹಿಸಿ ಅದನ್ನೊಂದು ಕರಡಿಗೆಯಲ್ಲಿಟ್ಟು – ಜೋತಿಬಾ ತೋಡಿಸಿದ್ದ ಗುಳಿಯಲ್ಲೇ ಹೂಳಲಾಗಿದೆ.
ಸಾವಿತ್ರಿಬಾಯಿ ಉಪಯೋಗಿಸುತ್ತಿದ್ದ ಬೃಂದಾವನ ಮತ್ತು ಅವರೇ ತಯಾರಿಸಿದ ಪಾದುಕೆಗಳು ಇಲ್ಲಿವೆ.
ಹತ್ತೊಂಬತ್ತನೇ ಶತಮಾನದ ಮಧ್ಯಭಾಗದಲ್ಲಿಯೇ ಸ್ತ್ರೀಯರ ಮತ್ತು ದಲಿತರ ಕಲಿಕೆ ಮತ್ತು ಅಭಿವೃದ್ಧಿಗಾಗಿ ಶ್ರಮಿಸಿದ ಫುಲೆ ದಂಪತಿಗಳ ವ್ಯಕ್ತಿತ್ವ ಬಹುಮುಖವಾದದ್ದು ಮತ್ತು ದೀರ್ಘಕಾಲದ ಪರಿಣಾಮವನ್ನು ಹೊಂದಿರುವಂತಹುದು.
ಅವರ ಬದುಕು ಮತ್ತು ಸಾಧನೆ ಬರೀ ಮಹಾರಾಷ್ಟ್ರಕ್ಕಲ್ಲ, ಇಡೀ ದೇಶಕ್ಕೆ ಮಾದರಿಯಾದುದು. ಇಂತಹ ಮಹಾತ್ಮರ ಸ್ಮರಣೆಯನ್ನು ಅರಸಿ ಇಲ್ಲಿ ಬರುವವರಿಗೆ ಕೊಂಚ ನಿರಾಶೆಯಾಗುತ್ತದೆ. ಅವರ ಜೀವನದ ಅಗಾಧತೆಯನ್ನು ಮತ್ತು ಬಹುಮುಖತೆಯನ್ನು ಸಂಪೂರ್ಣವಾಗಿ ಹಿಡಿದಿಡಲು ಈ ಸ್ಮಾರಕಕ್ಕೆ ಸಾಧ್ಯವಾಗಿಲ್ಲ. ಅಷ್ಟೇ ಅಲ್ಲ, ಇಲ್ಲಿರುವ ಎಲ್ಲ ಮಾಹಿತಿಯು ಮರಾಠಿ ಭಾಷೆಯಲ್ಲಿದೆ.
ಫುಲೆಯವರ ಅನುರೂಪದ ದಾಂಪತ್ಯ ಅವರ ಕುಟುಂಬಕ್ಕೆ ಮಾತ್ರ ಸೀಮಿತವಾಗದೆ ಲೋಕಕಲ್ಯಾಣಕ್ಕೆ ವಿಸ್ತರಿಸಿಕೊಂಡಿತ್ತು. ಫುಲೆಯವರು ನಡೆಸಿದ ಪ್ರತಿಯೊಂದು ಕೈಂಕರ್ಯದಲ್ಲೂ ಸಾವಿತ್ರಿಯವರ ಪಾತ್ರವಿತ್ತು. ಸಾವಿತ್ರಿ ಬಾಯಿಯವರೂ ಈ ಮನೆಯಲ್ಲಿ ವಾಸಿಸಿದ್ದರು – ಎಂಬ ಭಾವ ಬರುವಂತಹ ಇನ್ನು ಹೆಚ್ಚಿನ ಮಾಹಿತಿಯ ಸಂಗ್ರಹ ಮತ್ತು ಪ್ರದರ್ಶನದ ಅಗತ್ಯವಿದೆ.