ಬೆಂಗಳೂರು: ಪಂಚಾಯತ್ರಾಜ್ ಸಚಿವ ಎಚ್.ಕೆ. ಪಾಟೀಲರ ಮಹತ್ವಾಕಾಂಕ್ಷೆಯ ‘ಪಾತಾಳಗಂಗೆ’ ಯೋಜನೆಯಿಂದ ರಾಜ್ಯದ ಆರ್ಥಿಕ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆಯಾಗಲಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗೃಹ ಕಚೇರಿ ಕೃಷ್ಣಾದಲ್ಲಿ ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಎದುರಾದಾಗ ಕೆಜೆಪಿ ಶಾಸಕ ಬಿ.ಆರ್. ಪಾಟೀಲರು, ಪಾತಾಳಗಂಗೆ ಯೋಜನೆ ಕುರಿತು ಪ್ರಸ್ತಾವಿಸಿದರು.
‘ಏನ್ರೀ ನಮ್ಮ ದೊಡ್ಡ ಪಾಟೀಲ್ರು (ಎಚ್.ಕೆ) ಭಾರೀ ಯೋಜನೆ ರೂಪಿಸಿದ್ದಾರೆ. ಅದರಿಂದ ಎಕನಾಮಿಕಲಿ ದೊಡ್ಡ ಮಟ್ಟದ ಲಾಭ ಆಗುತ್ತದೆ’ ಎಂದು ಎಂ.ಬಿ. ಪಾಟೀಲರು ಪ್ರತಿಪಾದಿಸಿದರು. ‘ನೀರೇ ಬರುವುದಿಲ್ಲ, ಅದು ಹೇಗೆ ಹೇಳುತ್ತೀರಿ’ ಎಂದು ಬಿ.ಆರ್. ಪಾಟೀಲರು ಆಶ್ಚರ್ಯಚಕಿತರಾಗಿ ಪ್ರಶ್ನಿಸಿದರು.
‘ವಾಟರ್ ಸಿಗುತ್ತೆ ಅಂತ ಖಚಿತವಾಗಿ ಹೇಳೋದಕ್ಕೆ ಆಗೋಲ್ಲ. ಆದರೆ ಡೀಸೆಲ್ ಖಂಡಿತಾ ಸಿಗುತ್ತೆ. ಹಾಗಾದಾಗ ಡಾಲರ್ ಕೊಟ್ಟು ಡೀಸೆಲ್ ಖರೀದಿಸುವುದು ತಪ್ಪುತ್ತದೆ. ಕರ್ನಾಟಕಕ್ಕೆ ಕಡಿಮೆ ದರದಲ್ಲಿ ಡೀಸೆಲ್ ಸಿಗುತ್ತದೆ. ಇದರಿಂದ ರಾಜ್ಯದ ಆರ್ಥಿಕತೆ ಸುಧಾರಿಸುತ್ತದೆ’ ಎಂದು ಚಟಾಕಿ ಹಾರಿಸಿದರು. ಅವರ ಮಾತನ್ನು ಕೇಳಿ ಗಾಬರಿಯಾದ ಬಿ.ಆರ್. ಪಾಟೀಲರು ತಮ್ಮ ತಲೆಯ ಮೇಲಿದ್ದ ಗಾಂಧಿ ಟೋಪಿ ತೆಗೆದು ಮತ್ತೆ ತಲೆ ಮೇಲೆ ಹಾಕಿಕೊಂಡರು.