ಸಾಗರ: ಬರದ ಕಾರಣಕ್ಕೆ ಸಾಗರ, ಸೊರಬ, ಹೊಸನಗರ ತಾಲ್ಲೂಕುಗಳ ಬಹುತೇಕ ಅಡಿಕೆ ತೋಟಗಳಲ್ಲಿ ಮರಗಳು ಒಣಗಿ ಹೋಗಿದ್ದು, ಕಷ್ಟದಲ್ಲಿರುವ ಬೆಳೆಗಾರರಿಗೆ ರಾಜ್ಯ ಸರ್ಕಾರ ಹೆಚ್ಚಿನ ಪ್ರಮಾಣದ ನೆರವು ಒದಗಿಸಬೇಕು ಎಂದು ಪ್ರಾಂತ್ಯ ಅಡಿಕೆ ಬೆಳೆಗಾರರ ಸಂಘದ ಉಪಾಧ್ಯಕ್ಷ ಕಟ್ಟಿನಕೆರೆ ಸೀತಾರಾಮಯ್ಯ ಒತ್ತಾಯಿಸಿದ್ದಾರೆ.
ತಾಲ್ಲೂಕಿನ ವರದಹಳ್ಳಿ ಸಮೀಪದ ಗ್ರಾಮಕ್ಕೆ ಶನಿವಾರ ಭೇಟಿ ನೀಡಿ ಬಿಸಿಲಿನ ತಾಪಕ್ಕೆ ಒಣಗಿದ ಅಡಿಕೆ ತೋಟದ ಪರಿಶೀಲನೆ ನಡೆಸಿದ ನಂತರ ಸುದ್ದಿಗಾರ ರೊಂದಿಗೆ ಅವರು ಮಾತನಾಡಿದರು.
ಸಂಘದಿಂದ ಮೂರು ತಾಲ್ಲೂಕುಗಳ ಅಡಿಕೆ ತೋಟಗಳಿಗೆ ಖುದ್ದಾಗಿ ಭೇಟಿ ನೀಡಿ ಪರಿಸ್ಥಿತಿಯನ್ನು ಅವಲೋಕಿಸಲಾಗುತ್ತಿದೆ. ಹಿಂದೆಂದೂ ಕಾಣದ ರೀತಿಯಲ್ಲಿ ಈ ಬಾರಿ ಅಡಿಕೆ ತೋಟಗಳಲ್ಲಿ ಮರಗಳು ಒಣಗಿ ಬೆಳೆಗಾರರಿಗೆ ಹೆಚ್ಚಿನ ಪ್ರಮಾಣದ ನಷ್ಟ ಉಂಟಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸೊರಬ ತಾಲ್ಲೂಕಿನ ತಲಕಾಲುಕೊಪ್ಪ, ನಿಸರಾಣಿ, ಮೂಡಗೋಡು, ಸಂಪಿಗೆಸರ, ಹೊಸನಗರ ತಾಲ್ಲೂಕಿನ ನಿಟ್ಟೂರು, ಸಾಗರ ತಾಲ್ಲೂಕಿನ ವರದಾಮೂಲ, ವರದಹಳ್ಳಿ, ಮಾಲ್ವೆ, ಬೆಳೆಯೂರು, ಬಂದಗದ್ದೆ ಗ್ರಾಮಗಳಿಗೆ ಬೆಳೆಗಾರರ ಸಂಘದ ಪದಾಧಿಕಾರಿಗಳು ಈಗಾಗಲೇ ಭೇಟಿ ನೀಡಿದ್ದಾರೆ.
ಇಲ್ಲಿನ ಬೆಳೆಗಾರರು ಪ್ರತಿಕೂಲ ಸ್ಥಿತಿಯಲ್ಲಿದ್ದು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಬೆಳೆಗಾರರಿಗೆ ಆಗಿರುವ ನಷ್ಟದ ಬಗ್ಗೆ ವರದಿ ತಯಾರಿಸಿ ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ವ.ಶಂ.ರಾಮಚಂದ್ರ ಭಟ್ ಮಾತನಾಡಿ, ವಿಪರೀತ ಬಿಸಿಲು ಹಾಗೂ ಮಳೆಯ ಕೊರತೆಯಿಂದ ಫಸಲು ನಷ್ಟದ ಜತೆಗೆ ಮರಗಳು ಒಣಗಿ ನೆಲಕ್ಕೆ ಉರುಳುತ್ತಿರುವುದು ಬೆಳೆಗಾರರಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಬರ ಪರಿಹಾರ ಯೋಜನೆಯಡಿ ಅಡಿಕೆ ಬೆಳೆಗಾರರಿಗೆ ರಾಜ್ಯ ಸರ್ಕಾರ ಹೆಚ್ಚಿನ ಪರಿಹಾರ ಒದಗಿಸಬೇಕು ಎಂದು ಆಗ್ರಹಿಸಿದರು. ಮಧುಕೇಶ್, ಸುರೇಶ್, ಗಣಪತಿ, ವೆಂಕಟೇಶ್, ಲಕ್ಷ್ಮಿನಾರಾಯಣ ಹಾಜರಿದ್ದರು.