ಕಲಬುರ್ಗಿ: ಇಲ್ಲಿನ ಇಂದಿರಾ ಸ್ಮಾರಕ ಭವನ (ಟೌನ್ಹಾಲ್)ದ ಆವರಣದಲ್ಲಿ ಸ್ಥಾಪಿಸಲಾಗಿರುವ ಡಾ. ಬಾಬು ಜಗಜೀವನರಾಂ ಅವರ ಪುತ್ಥಳಿಯನ್ನು ಮೇ 27ರಂದು ಅನಾವರಣಗೊಳಿಸಲಾಗುತ್ತಿದ್ದು, ಇದಕ್ಕಾಗಿ ಅಂತಿಮ ಹಂತದ ಕೆಲಸಗಳು ಭರದಿಂದ ಸಾಗಿವೆ.
ಟೌನ್ಹಾಲ್ ಆವರಣದಲ್ಲಿ ಡಾ.ಬಾಬು ಜಗಜೀವನರಾಂ ಅವರ ಪುತ್ಥಳಿಯನ್ನು ಸ್ಥಾಪಿಸಬೇಕು ಎಂದು 2011–12ರಲ್ಲಿ ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಿರ್ಣಯಿಸಲಾಗಿತ್ತು. ಪಾಲಿಕೆಯ ನಿಧಿಯಿಂದ ₹15 ಲಕ್ಷ ಮತ್ತು ಎಸ್ಎಫ್ಸಿಯ ₹15 ಲಕ್ಷ ಅನುದಾನ ಸೇರಿದಂತೆ ಒಟ್ಟು ₹30 ಲಕ್ಷ ಅನುದಾನದಲ್ಲಿ ಪುತ್ಥಳಿ ಸ್ಥಾಪನೆಗೆ ಒಮ್ಮತದ ತೀರ್ಮಾನ ಕೈಗೊಳ್ಳಲಾಗಿತ್ತು.
‘ಪುತ್ಥಳಿ ತಯಾರಿಸಲು 2012ರಲ್ಲಿ ಟೆಂಡರ್ ಕರೆಯಲಾಗಿತ್ತು. ಚೆನ್ನೈನ ಕಲಾವಿದ ಮೋಹನದಾಸ್ ಎಂಬುವರು ಪುತ್ಥಳಿ ತಯಾರಿಸಿಕೊಡಲು ಮುಂದೆ ಬಂದರು. 12 ಅಡಿ ಎತ್ತರದ ಕಂಚಿನ ಪುತ್ಥಳಿ ಇದೀಗ ಸಿದ್ಧಗೊಂಡಿದ್ದು, ಉದ್ಯಾನ ನಿರ್ಮಾಣ ಕಾಮಗಾರಿ ನಡೆದಿದೆ’ ಎಂದು ಪಾಲಿಕೆ ಆಯುಕ್ತ ಪಿ.ಸುನಿಲಕುಮಾರ ತಿಳಿಸಿದರು.
‘ಹಲವು ವರ್ಷಗಳಿಂದ ಪುತ್ಥಳಿ ಅನಾವರಣ ನನೆಗುದಿಗೆ ಬಿದ್ದಿತ್ತು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲಾಗಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೇ 27ರಂದು ಅನಾವರಣಗೊಳಿಸುವರು’ ಎಂದು ಹೇಳಿದರು.