ಕುಕನೂರು: ಇಲ್ಲಿನ ರಾಜೂರು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಆಡೂರು ಗ್ರಾಮದಲ್ಲಿ ಕಳೆದು ಒಂದು ತಿಂಗಳಿಂದ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆಯಾಗದೆ ಇರುವುದರಿಂದ ಗ್ರಾಮಸ್ಥರು ನೀರಿಗಾಗಿ ಪರದಾಡುವಂತಾಗಿದೆ.
ತೋಟಗಳಿಗೆ ಅಲೆದಾಟ: ಕುಡಿಯುವ ನೀರು ಸರಿಯಾಗಿ ಬಾರದೇ ಇರುವುದರಿಂದ ನಿವಾಸಿಗಳು ಸಮೀಪದ ತೋಟ, ಹಳ್ಳದ ನೀರು, ಬಾವಿಗಳಿಗೆ ತೆರಳಿ ನೀರು ತರುತ್ತಿದ್ದಾರೆ. ಬೇಸಿಗೆ ರಜೆ ಕಳೆಯಬೇಕಾದ ಗ್ರಾಮದ ಶಾಲಾ ಮಕ್ಕಳು ನೀರು ತರುವ ಕಾಯಕದಲ್ಲಿ ನಿರತರಾಗಿದ್ದಾರೆ ಎಂದು ಗ್ರಾಮದ ಶಂಕ್ರಪ್ಪ ಹೊಸಮನಿ ಅವರು ಅಳಲು ತೋಡಿಕೊಂಡರು.
ಪಂಚಾಯಿತಿ ಅಧಿಕಾರಿಗಳು ಹಾಗೂ ಜನ ಪ್ರತಿನಿಧಿಗಳು ನೀರು ಪೂರೈಕೆ ಮಾಡುವಲ್ಲಿ ವಿಫಲವಾಗಿದ್ದಾರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರು ಪೂರೈಸಬೇಕು ಎಂದು ನಿವಾಸಿಗಳಾದ ಬಸವರಾಜ ಮುತ್ತಾಳ, ಪ್ರಭುರಾಜ ಮುತ್ತಾಳ, ಈರಣ್ಣ ಚೌಡಿ, ಸಂಗಪ್ಪ ಮುತ್ತಾಳ, ಭೀಮಪ್ಪ ಮುತ್ತಾಳ, ಭೀಮಣ್ಣ ನಾಗೋಜಿ ಒತ್ತಾಯಿಸಿದ್ದಾರೆ.