ನವದೆಹಲಿ: ಜಮ್ಮು ಕಾಶ್ಮೀರದಾದ್ಯಂತ ಸಮಸ್ಯೆಗಳೇನೂ ಇಲ್ಲ. ಅಲ್ಲಿನ ಮೂರು ಮತ್ತು ಇನ್ನೊಂದು ಜಿಲ್ಲೆಯ ಅರ್ಧ ಭಾಗದಲ್ಲಿ ಮಾತ್ರ ಸಮಸ್ಯೆ ಇದೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಶನಿವಾರ ಆಜ್ ತಕ್ ಸಂಪಾದಕರ ದುಂಡು ಮೇಜಿನ ಸಮಾವೇಶ ಕಾರ್ಯಕ್ರಮದಲ್ಲಿ ಮಾತನಾಡಿದ ಶಾ, ಕಳೆದ ಕೆಲವು ವಾರಗಳಿಂದ ಹಿಂಸಾಚಾರದಿಂದ ಹದಗೆಟ್ಟಿರುವ ಕಾಶ್ಮೀರ ಕಣಿವೆಯಲ್ಲಿ ಶಾಂತಿ ನೆಲೆಗೊಳಿಸುವುದಕ್ಕಾಗಿ ಬಿಜೆಪಿ ಸರ್ಕಾರ ಪ್ರಯತ್ನಿಸುತ್ತಿದೆ ಎಂದಿದ್ದಾರೆ.
ಕಾಶ್ಮೀರದಲ್ಲಿರುವ ಮೂರು ಮತ್ತು ಇನ್ನೊಂದು ಜಿಲ್ಲೆಯ ಅರ್ಧ ಭಾಗದಲ್ಲಿ ಮಾತ್ರ ಸಮಸ್ಯೆ ಇದೆ. ದಕ್ಷಿಣ ಕಾಶ್ಮೀರದ ಎರಡು ಜಿಲ್ಲೆ ಮತ್ತು ಶ್ರೀನಗರದಲ್ಲಿ ಕೇಂದ್ರ ಸರ್ಕಾರ ವಿರೋಧಿ ಪ್ರತಿಭಟನೆಗಳನ್ನು ಉಲ್ಲೇಖಿಸಿ ಶಾ ಈ ಮಾತನ್ನು ಹೇಳಿದ್ದಾರೆ. ದಕ್ಷಿಣ ಕಾಶ್ಮೀರದಲ್ಲಿರುವ ಕಾಲೇಜು ಮತ್ತು ಶಾಲಾ ವಿದ್ಯಾರ್ಥಿಗಳೂ ಪ್ರತಿಭಟನೆಗೆ ಇಳಿದಿರುವುದರಿಂದ ಸದ್ಯ ಅಲ್ಲಿ ಉದ್ವಿಗ್ನ ಪರಿಸ್ಥಿತಿ ಇದೆ.
ಕಾಂಗ್ರೆಸ್ನಿಂದಾಗಿಯೇ ಕಾಶ್ಮೀರ ಸಮಸ್ಯೆ ತಲೆದೋರಿದೆ. ಆದರೆ ಮೋದಿ ಸರ್ಕಾರ ಕಾಶ್ಮೀರಿಗಳ ಹೃದಯವನ್ನು ಗೆಲ್ಲುವ ಪ್ರಯತ್ನ ಮಾಡುತ್ತಿದೆ ಎಂದು ಶಾ ಹೇಳಿದ್ದಾರೆ.