‘ಕನ್ನಡಿಗರು ಅಭಿಮಾನಶೂನ್ಯರು’ ಎಂದು ಚಲನಚಿತ್ರ ನಿರ್ದೇಶಕ ರಾಮಗೋಪಾಲ ವರ್ಮಾ ಆಡಿರುವ ಮಾತಿನಲ್ಲಿ (ಪ್ರ.ವಾ., ಮೇ 19) ಅರ್ಥವಿದೆ.
ಕನ್ನಡಿಗರ ನಿರಭಿಮಾನವನ್ನು ಪ್ರತಿಪಾದಿಸಲು ನೂರಾರು ಪುರಾವೆಗಳಿವೆ. ಬಾಹುಬಲಿ ಚಿತ್ರ ವೀಕ್ಷಣೆಯ ವಿಚಾರ ಅಂಥವುಗಳಲ್ಲಿ ಒಂದು.
ನಾವು ಸ್ವಾಭಿಮಾನಿಗಳಾಗಿದ್ದರೆ ಬಾಹುಬಲಿ ಚಿತ್ರವನ್ನು ಕನ್ನಡದಲ್ಲಿಯೂ ನಿರ್ಮಿಸುವಂತೆ ಒತ್ತಾಯ ಮಾಡಬೇಕಿತ್ತು. ದಕ್ಷಿಣದ ಮೂರು ಭಾಷೆಗಳಲ್ಲಿ ತಯಾರಿಸಿದ ಅದರ ನಿರ್ಮಾಪಕರಿಗೆ ಕನ್ನಡ ಏಕೆ ಬೇಡವಾಯಿತು ಎಂಬುದು ಸ್ಪಷ್ಟ.
ನಮ್ಮ ಪರಭಾಷಾ ವ್ಯಾಮೋಹ ಅವರಿಗೆ ಚೆನ್ನಾಗಿ ಗೊತ್ತಿದೆ. ಹೇಗಿದ್ದರೂ ಇಲ್ಲಿಂದ ಕೋಟಿಗಟ್ಟಲೆ ದೋಚಬಹುದೆಂಬುದನ್ನು ತಿಳಿದೇ ಕನ್ನಡಿಗರನ್ನು ಅವಮಾನಿಸಿದ್ದಾರೆ. ಡಬ್ಬಿಂಗ್, ಟೀಕೆಗಳಂತಹ ವಿಚಾರಗಳನ್ನು ಎತ್ತಿ ಆಡುವ ನಮ್ಮ ಹೋರಾಟಗಾರರು ಈ ಭೇದ ಭಾವದ ಬಗ್ಗೆ ಪ್ರತಿಭಟಿಸಬೇಕಿತ್ತು.
ಕನ್ನಡದ ಇಂದಿನ ಸ್ಥಿತಿಗೆ ನಮ್ಮ ನಿರಭಿಮಾನವೇ ಕಾರಣ. ಇಂಗ್ಲಿಷ್, ಹಿಂದಿಯಂಥ ಭಾಷೆಗಳ ಆಕ್ರಮಣ ಅಥವಾ ನಾವೇ ಅವುಗಳನ್ನು ಆವಾಹಿಸಿಕೊಂಡಿರುವುದರಿಂದ ಕನ್ನಡ ನಲುಗಿದೆ. ಕರ್ನಾಟಕದೊಳಗೆ ಕನ್ನಡ ಯಾರಿಗೂ ಬೇಕಿಲ್ಲವಷ್ಟೆ! ಹೀಗಿರುವಾಗ ವರ್ಮಾರಂಥವರು ನಾವು ನಿರಭಿಮಾನಿಗಳೆಂಬ ಕಟು (ಕಹಿ) ವಾಸ್ತವವನ್ನು ಹೇಳಿದಾಗ ಏಕೆ ಕೋಪಗೊಳ್ಳಬೇಕು?.
ಡಾ. ಜೆ.ಕೆ. ರಮೇಶ, ತೀರ್ಥಹಳ್ಳಿ