ಗಂಗೊಳ್ಳಿ(ಬೈಂದೂರು): ‘ಭಾರತೀಯ ಪರಂಪರೆಯ ಆಯುರ್ವೇದ ಚಿಕಿತ್ಸಾ ಪದ್ಧತಿಯು ಪ್ರಕೃತಿಗೆ ಹತ್ತಿರವಾಗಿದ್ದು, ಪರಿಣಾಮದಲ್ಲೂ ಅನ್ಯ ಚಿಕಿತ್ಸಾ ವಿಧಾನಗಳಿಗಿಂತ ಹಿಂದಿಲ್ಲ’ ಎಂದು ಮಣಿಪಾಲ ಕೆಎಂಸಿ ಆಸ್ಪತ್ರೆಯ ಆಯುರ್ವೇದ ವಿಭಾಗದ ಮುಖ್ಯಸ್ಥ ಡಾ. ಎಂ. ಎಸ್. ಕಾಮತ್ ಹೇಳಿದರು.
ಸರಸ್ವತಿ ವಿದ್ಯಾನಿಧಿ ಮತ್ತು ಕೋಟೇಶ್ವರದ ಶ್ರೀ ಯಾದವೇಂದ್ರ ಆಯುರ್ವೇದ ವೈದ್ಯಶಾಲೆ ಜಂಟಿ ಆಶ್ರಯದಲ್ಲಿ ಭಾನುವಾರ ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಕಾಶಿ ಮಠಾಧೀಶ ಸುಧೀಂದ್ರ ತೀರ್ಥ ಸ್ವಾಮೀಜಿಯವರಿಗೆ ಜನರಿಗೆ ಉಚಿತ ಆಯುರ್ವೇದ ಚಿಕಿತ್ಸೆ ನೀಡಬೇಕೆಂಬ ಹಂಬಲ ಇದ್ದ ಕಾರಣ ಕೋಟೇಶ್ವರದಲ್ಲಿ ಭುವನೇಂದ್ರ ಚಾರಿಟಬಲ್ ಟ್ರಸ್ಟ್ ಸ್ಥಾಪಿಸಿ, ಚಿಕಿತ್ಸೆಗೆ ವ್ಯವಸ್ಥೆ ಮಾಡಿದರು. ಇದು ಬಹಳ ದೊಡ್ಡ ಕೆಲಸ’ ಎಂದು ಅವರು ಹೇಳಿದರು. ಸರಸ್ವತಿ ವಿದ್ಯಾನಿಧಿಯ ಅಧ್ಯಕ್ಷ ಎನ್. ಸದಾಶಿವ ನಾಯಕ್ ಅಧ್ಯಕ್ಷತೆ ವಹಿಸಿದ್ದರು.
ಕೋಟೇಶ್ವರ ಯಾದವೇಂದ್ರ ಆಯುರ್ವೇದ ವೈದ್ಯಶಾಲೆಯ ಕಾರ್ಯದರ್ಶಿ ಕೆ. ದಿನೇಶ ಕಾಮತ್, ಟ್ರಸ್ಟಿ ಕೆ. ಶ್ರೀಧರ ಕಾಮತ್, ಗಂಗೊಳ್ಳಿ ಟೌನ್ ಸೌಹಾರ್ದ ಸಹಕಾರಿಯ ಅಧ್ಯಕ್ಷ ಎಚ್. ಗಣೇಶ ಕಾಮತ್ ಇದ್ದರು.
ವಿದ್ಯಾನಿಧಿಯ ಕಾರ್ಯದರ್ಶಿ ಕೆ. ರಾಮನಾಥ ನಾಯಕ್ ಸ್ವಾಗತಿಸಿ, ಎಂ. ಜಿ. ರಾಘವೇಂದ್ರ ಆರ್. ಭಂಡಾರ್ಕಾರ್ ವಂದಿಸಿದರು.ಬಿ. ರಾಘವೇಂದ್ರ ಪೈ ನಿರೂಪಿಸಿದರು.