ಹುಣಸೂರು: ‘ಮೇ 22ರ ನಂತರ ಜೆಡಿಎಸ್ ಮೈಸೂರು ಜಿಲ್ಲಾ ಘಟಕದ ಆಂತರಿಕ ಸಮಸ್ಯೆಗಳಿಗೆ ಅಂತ್ಯ ಹಾಡಲಿದ್ದೇನೆ ಎಂದು’ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ.ದೇವೇಗೌಡ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೇ ಮಹದೇಶ್ವರ ಸ್ವಾಮಿ ದೇವ ಸ್ಥಾನಕ್ಕೆ ಭೇಟಿ ನೀಡಿ, ಪೂಜಾ ಕಾರ್ಯ ದಲ್ಲಿ ಭಾಗವಹಿಸಿ ಹಿಂದಿರುಗುವಾಗ ಮೈಸೂರಿನಲ್ಲಿ ವಾಸ್ತವ್ಯ ಹೂಡಲಿದ್ದೇನೆ.
ಆಗ ಮೈಸೂರು ಜಿಲ್ಲೆಯಲ್ಲಿ ತಲೆಯೆತ್ತಿ ರುವ ಪಕ್ಷದ ಎಲ್ಲ ಆಂತರಿಕ ಸಮಸ್ಯೆಗಳ ಬಗ್ಗೆ ಪಕ್ಷದ ಮುಖಂಡರಿಂದ ಮಾಹಿತಿ ಸಂಗ್ರಹಿಸಿ, ಎಲ್ಲ ಸಮಸ್ಯೆಗಳಿಗೆ ಅಂತ್ಯ ಹಾಡುವ ವಿಶ್ವಾಸವಿದೆ. ಸಾರ್ವಜನಿಕ ವಾಗಿ ಪಕ್ಷದ ಆಂತರಿಕ ವಿಚಾರಗಳನ್ನು ಚರ್ಚಿಸಲು ಇಚ್ಚಿಸುವುದಿಲ್ಲ. ಮನೆಯ ಸಮಸ್ಯೆ ಮನೆಯೊಳಗೆ ಬಗೆ ಹರಿಸಿಕೊಳ್ಳುತ್ತೇವೆ ಎಂದರು.
ಮಾಜಿ ಸಚಿವ ಎಚ್.ವಿಶ್ವನಾಥ್ ಜೆಡಿಎಸ್ ಸೇರುವ ಕುರಿತು ಕೇಳಿದ ಪ್ರಶ್ನೆಗೆ, ರಾಜಕೀಯಕ್ಕೆ ಸಂಬಂಧಿಸಿದಂತೆ ಹೆಚ್ಚಿಗೆ ಏನೂ ಹೇಳುವುದಿಲ್ಲ. ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರೊಂದಿಗೆ ಪ್ರಸ್ತಾಪಿ ಸಿದ ಬಳಿಕ ಎಲ್ಲವನ್ನೂ ಅಂತ್ಯ ಗೊಳಿಸಲಾಗುತ್ತದೆ ಎಂದು ಅವು ತಿಳಿಸಿದರು.
ಕೆ.ಮಹದೇವ್ ಅಭ್ಯರ್ಥಿ: ಪಿರಿಯಾ ಪಟ್ಟಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ವಿಚಾರದಲ್ಲಿ ಎದುರಾಗಿರುವ ಗೊಂದಲಕ್ಕೆ ತೆರೆ ಎಳೆದ ಅವರು, ತಾಲ್ಲೂಕು ಘಟಕದ ಅಧ್ಯಕ್ಷ ಕೆ.ಮಹದೇವ್ ಅವರೇ ಅಭ್ಯರ್ಥಿ ಎಂದು ಹೇಳಿದರು.
ಶಾಸಕ ಎಚ್.ಡಿ.ರೇವಣ್ಣ ಮಾತನಾಡಿ, ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ಕುಮಾರಸ್ವಾಮಿ ನೇತೃತ್ವದಲ್ಲಿ 2018ರ ಸಾರ್ವತ್ರಿಕ ಚುನಾವಣೆ ಎದುರಿಸಲು ಸಜ್ಜಾಗಿದ್ದು, ರಾಜ್ಯದ 224 ಕ್ಷೇತ್ರದಲ್ಲೂ ಪಕ್ಷ ಸ್ವತಂತ್ರವಾಗಿ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲಿದೆ. ಯಾವುದೇ ಪಕ್ಷದೊಂದಿಗೂ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ ಎಂದರು.
ಎಚ್.ಡಿ.ಕುಮಾರಸ್ವಾಮಿ ಅವರು ರಾಜ್ಯದಲ್ಲಿ 20 ತಿಂಗಳು ನಡೆಸಿದ ಆಡಳಿತವನ್ನು ಮತದಾರರು ಇಂದಿಗೂ ಮರೆತಿಲ್ಲ. ಕೃಷಿ ಸಾಲ ಮನ್ನಾ ಮಾಡುವ ವಿಚಾರದಲ್ಲಿ ಕಾಂಗ್ರೆಸ್ ಮುಖಂಡರು ಒಂದೊಂದು ಹೇಳಿಕೆ ನೀಡುತ್ತಿದ್ದು, ರೈತರ ವಿಚಾರದಲ್ಲಿ ಕಾಂಗ್ರೆಸ್ ತೋರಿಸುತ್ತಿರುವ ಆಸಕ್ತಿ ಮಣ್ಣಿನ ಮಕ್ಕಳು ಮರೆಯುವುದಿಲ್ಲ ಎಂದು ಹೇಳಿದರು.
ಆಹ್ವಾನಿಸುವುದು ಕರ್ತವ್ಯ
ಪಕ್ಷಕ್ಕೆ ಯಾರೇ ಬಂದರೂ ಆಹ್ವಾನಿಸುವುದು ನಮ್ಮ ಕರ್ತವ್ಯ. ಸೇರ್ಪಡೆ ನಂತರ ಪಕ್ಷದ ವರಿಷ್ಠರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬಂದವರು ಬದ್ಧವಾಗಿರಬೇಕು ಎಂದು ಎಚ್.ವಿಶ್ವನಾಥ್ ಜೆಡಿಎಸ್ ಸೇರ್ಪಡೆ ಕುರಿತ ಪ್ರಶ್ನೆಗೆ ಎಚ್.ಡಿ.ರೇವಣ್ಣ ಉತ್ತರಿಸಿದರು.
ವರಿಷ್ಠರು ಇಚ್ಛಿಸಿದರೆ ಪ್ರಜ್ವಲ್ ಸ್ಪರ್ಧೆ
ಹುಣಸೂರು: ಪ್ರಜ್ವಲ್ ರೇವಣ್ಣ ಹುಣಸೂರಿನಿಲ್ಲಿ ಪಕ್ಷ ಸಂಘಟಿಸಲು ದುಡಿಯುತ್ತಿದ್ದಾರೆ. ಅಭ್ಯರ್ಥಿಯಾಗುವ ನಿರೀಕ್ಷೆಯಿಂದಲ್ಲ. ಪಕ್ಷ ಸಂಘಟನೆಗೆ ರಾಜ್ಯದಲ್ಲಿ ಯಾರು ಎಲ್ಲಿ ಬೇಕಾದರೂ ಕೆಲಸ ಮಾಡಬಹುದು.
ಕೆಲಸ ಮಾಡಿದವರೆಲ್ಲರಿಗೂ ಅಭ್ಯರ್ಥಿಯನ್ನಾಗಿ ಮಾಡಲು ಸಾಧ್ಯವೇ ಎಂದು ಪ್ರಶ್ನಿಸಿದ ಅವರು, ಪ್ರಜ್ವಲ್ ರೇವಣ್ಣ ಅವರನ್ನು ಕಣಕ್ಕೆ ಇಳಿಸಬೇಕು ಎಂದು ಪಕ್ಷದ ವರಿಷ್ಠರು ಇಚ್ಛಿಸಿ ಟಿಕೆಟ್ ನೀಡಿದರೇ ಟಿಕೆಟ್ ನೀಡಿದ ಕ್ಷೇತ್ರದಲ್ಲಿ ಸ್ಪರ್ಧಿಸು ತ್ತಾರೆ. ಇಲ್ಲವೇ ಪಕ್ಷದ ಕಾರ್ಯಕರ್ತರಾಗಿಯೇ ಮುಂದು ವರಿಯುತ್ತಾರೆ.
ಈ ವಿಚಾರದಲ್ಲಿ ನಾನು ಮೂಗು ತೂರಿಸುವುದಿಲ್ಲ ಎಂದು ಪ್ರಜ್ವಲ್ ರೇವಣ್ಣ ಹುಣಸೂರು ಕ್ಷೇತ್ರದ ಅಭ್ಯರ್ಥಿ ಎಂಬ ಗಾಳಿ ಸುದ್ದಿಯ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.