ಬೀದರ್: ಔರಾದ್ ತಾಲ್ಲೂಕಿನ ನಾರಾಯಣಪುರ ಗ್ರಾಮದಲ್ಲಿ ಭಾನುವಾರ ಜಮೀನು ಹಂಚಿಕೆ ವಿಚಾರದಲ್ಲಿ ಸಹೋದರರ ನಡುವೆ ಆರಂಭವಾದ ಜಗಳವು ತಮ್ಮನ ಕೊಲೆಯೊಂದಿಗೆ ಅಂತ್ಯಗೊಂಡಿದೆ.
ಗ್ರಾಮದ ಕಾಮಶೆಟ್ಟಿ ಬಿರಾದಾರ (55) ಕೊಲೆಯಾದವರು. ‘ಕಾಮಶೆಟ್ಟಿ ಅವರು ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ ಸ್ಥಳಕ್ಕೆ ಬಂದ ಆತನ ಅಣ್ಣ ಅಮರೇಶ ಹಾಗೂ ಅವರ ಮಕ್ಕಳಾದ ರೇವಣಪ್ಪ ಮತ್ತು ಸುರೇಶ ಜಗಳ ತೆಗೆದು ಮರ್ಮಾಂಗಕ್ಕೆ ಹೊಡೆದು ಕೊಲೆ ಮಾಡಿದ್ದಾರೆ ಎಂದು ನೀಡಿರುವ ದೂರಿನಲ್ಲಿ ತಿಳಿಸಲಾಗಿದೆ.
‘ತನಗೆ ಹಂಚಿಕೆಯಾಗಿದ್ದ ಜಮೀನಿನಲ್ಲಿ ಉಳುಮೆ ಮಾಡುತ್ತಿದ್ದ ಕಾಮಶೆಟ್ಟಿ ಅವರ ಮೇಲೆ ಜಗಳ ಆರಂಭಿಸಿದ ಅಮರೇಶ ಹಾಗೂ ಆತನ ಮಕ್ಕಳು ಹಲ್ಲೆ ನಡೆಸಿದ್ದಾರೆ. ಸ್ಥಳಕ್ಕೆ ನಾನು ಹಾಗೂ ಮಗ ರಜನಿಕಾಂತ ಬರುವಷ್ಟರಲ್ಲಿಮೂವರು ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು.
ಹಲ್ಲೆಯಿಂದ ಗಂಭೀರವಾಗಿ ಗಾಯಗೊಂಡ ಕಾಮಶೆಟ್ಟಿ ಅವರನ್ನು ಆಸ್ಪತ್ರೆಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟರು ಎಂದು ಕಾಮಶೆಟ್ಟಿ ಪತ್ನಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಘಟನೆ ಸಂಬಂಧ ಔರಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಪೂರ್ವಜರ ಜಮೀನನ್ನು 20 ವರ್ಷಗಳ ಹಿಂದೆ ಹಂಚಿಕೊಂಡಿದ್ದರು. ಆದರೆ, ಜಮೀನು ಹಂಚಿಕೆಯಾಗಿರುವಂತೆ ಖಾತೆ ಮಾಡಿಕೊಂಡಿರಲಿಲ್ಲ. ಈ ಸಂಬಂಧ ಕಳೆದ 10 ದಿವಸಗಳಿಂದ ಇಬ್ಬರಲ್ಲಿ ಜಗಳ ಆರಂಭವಾಗಿತ್ತು’ ಎಂದು ಪದ್ಮಾವತಿ ತಿಳಿಸಿದ್ದಾರೆ.