ಕುಶಾಲನಗರ: ಕುಶಾಲನಗರ ಯುವಬ್ರಿಗೇಡ್ ಮತ್ತು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯು ಇಲ್ಲಿನ ಕೊಪ್ಪ ಗೇಟ್ ಬಳಿ ಕಾವೇರಿ ನದಿಯನ್ನು ಶುಚಿಗೊಳಿಸಿತು. ಕಾವೇರಿ ಪ್ರತಿಮೆಗೆ ಚಕ್ರವರ್ತಿ ಸೂಲಿಬೆಲೆ ನೇತೃತ್ವದಲ್ಲಿ ಪೂಜೆ ಸಲ್ಲಿಸಲಾಯಿತು.
ರಸ್ತೆ, ರೈಲು, ವಿದ್ಯುತ್ ಮಾರ್ಗ ನಿರ್ಮಾಣ ಮೊದಲಾದ ಅಭಿವೃದ್ಧಿ ಹೆಸರಿನಲ್ಲಿ ಕೊಡಗಿನಲ್ಲಿ ಅರಣ್ಯ ನಾಶ ಮಾಡಲಾಗುತ್ತಿದೆ. ಇದರಿಂದಾಗಿ ಮಳೆ ಪ್ರಮಾಣ ಕಡಿಮೆ ಆಗುತ್ತಿದೆ. ಕಾವೇರಿ ನದಿಯಲ್ಲಿ ನೀರಿನ ಹರಿವು ಕ್ಷೀಣಿಸುತ್ತಿದೆ. ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಮೂಲದಲ್ಲೇ ಕಾವೇರಿ ನದಿಯನ್ನು ಸ್ವಚ್ಛ ಮಾಡಲಾಗುತ್ತಿದೆ ಎಂದರು.
ಪ್ರವಾಸಿಗೊಂದು ಗಿಡ ಯೋಜನೆ: ಕಾವೇರಿ ನದಿ ದಂಡೆಯುದ್ದಕ್ಕೂ ಅರಣ್ಯ ಬೆಳೆಸುವ ಯೋಜನೆಯಾದ ‘ಪ್ರವಾಸಿಗೊಂದು ಗಿಡ’ ಯೋಜನೆಗೂ ಇದೇ ಚಾಲನೆ ನೀಡಲಾಯಿತು. ಕುಶಾಲನಗರದ ನದಿ ದಂಡೆಯಲ್ಲಿ ವಿವಿಧ ಜಾತಿಯ ಗಿಡಗಳನ್ನು ನೆಡಲಾಯಿತು.
ಕುಶಾಲನಗರ ಕೊಡವ ಸಮಾಜ ಅಧ್ಯಕ್ಷ ಮಂಡೇಪಂಡ ಬೋಸ್ಮೊಣ್ಣಪ್ಪ, ಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಲಿಂಗರಾಜು, ಸಮಿತಿ ಪ್ರಮುಖರಾದ ಸೋಮಶೇಖರ್, ಕೆ.ಜಿ. ಮನು, ಎಂ.ಡಿ.ಕೃಷ್ಣಪ್ಪ, ಕೆ.ಎನ್.ದೇವರಾಜ್, ಮಂಜು, ಬೆಂಗಳೂರು, ಮೈಸೂರು, ಉಡುಪಿ, ಮಂಗಳೂರು ಹಾಗೂ ತಮಿಳುನಾಡಿನಿಂದ ಬಂದಿದ್ದ ಯುವಬ್ರಿಗೇಡ್ನ ಕಾರ್ಯಕರ್ತರು ಪಾಲ್ಗೊಂಡಿದ್ದರು.