ನವದೆಹಲಿ: ಬಾನುಲಿ ಭಾಷಣ ‘ಮನ್ ಕೀ ಬಾತ್’ನ ಮೂಲಕ ಜನರನ್ನು ತಲುಪಿರುವ ಪ್ರಧಾನಿ ನರೇಂದ್ರ ಮೋದಿ ಅವರು, ‘ಜನ್ ಕೀ ಬಾತ್’ ಕಾರ್ಯಕ್ರಮದ ಮೂಲಕ ತಮ್ಮ ಸರ್ಕಾರದ ಬಗ್ಗೆ ಜನರಿಗಿರುವ ಅಭಿಪ್ರಾಯ ತಿಳಿಯಲು ಮುಂದಾಗಿದ್ದಾರೆ.
ಮೋದಿ ಸರ್ಕಾರಕ್ಕೆ ಮೂರು ವರ್ಷ ತುಂಬಿದ ಪ್ರಯುಕ್ತ ಆಯೋಜಿಸಿರುವ 20 ದಿನಗಳ ಸಂಭ್ರಮಾಚರಣೆಯ ಭಾಗವಾಗಿ ಈ ಕಾರ್ಯಕ್ರಮ ನಡೆಸಲು ಬಿಜೆಪಿ ಮುಂದಾಗಿದೆ.
ಬಿಜೆಪಿ ಸರ್ಕಾರವಿರುವ ರಾಜ್ಯಗಳ ಮುಖ್ಯಮಂತ್ರಿಗಳು ಮತ್ತು ಸಚಿವರು ತಮ್ಮ ರಾಜಕೀಯ ಪ್ರತಿಸ್ಪರ್ಧಿಗಳ ಸರ್ಕಾರವಿರುವ ರಾಜ್ಯಗಳಿಗೆ ಭೇಟಿ ನೀಡಲಿದ್ದಾರೆ.
ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಬಿಹಾರ್ಗೆ ಮತ್ತು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವಾಜಿ ಸಿಂಗ್ ಚೌಹಾಣ್ ಅವರು ಕರ್ನಾಟಕ ಮತ್ತು ಒಡಿಶಾಗೆ ಭೇಟಿ ನೀಡಲಿದ್ದಾರೆ.
ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಪ್ರಧಾನಿ ಮೋದಿ ಮತ್ತು ಅವರ ಸಂಪುಟದ ಸಚಿವರಲ್ಲದೇ ಸುಮಾರು 450 ಮಂದಿ ನಾಯಕರು ಸೇರಿ ಸುಮಾರು 900 ಕಾರ್ಯಕ್ರಮಗಳನ್ನು ಬೇರೆ ಬೇರೆ ರಾಜ್ಯಗಳಲ್ಲಿ ನಡೆಸಲಿದ್ದಾರೆ.
ಮೇ 26ರಿಂದ ಜೂನ್ 15ರವರೆಗೆ ಈ ಕಾರ್ಯಕ್ರಮಗಳು ನಡೆಯಲಿವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್ ತಿಳಿಸಿದ್ದಾರೆ.