ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರವಿಂದ ಕೇಜ್ರಿವಾಲ್‌ ವಿರುದ್ಧ ಮತ್ತೊಂದು ಮಾನನಷ್ಟ ಪ್ರಕರಣ

Last Updated 22 ಮೇ 2017, 19:30 IST
ಅಕ್ಷರ ಗಾತ್ರ

ನವದೆಹಲಿ: ತಮ್ಮ ವಿರುದ್ಧ ‘ಠಕ್ಕ’ ಎಂಬ ಆಕ್ಷೇಪಾರ್ಹವಾದ ಪದ ಬಳಸುವಂತೆ ವಕೀಲ ರಾಮ್‌ ಜೇಠ್ಮಲಾನಿ ಅವರಿಗೆ ಸೂಚಿಸಿದ್ದ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌ ವಿರುದ್ಧ ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ₹10 ಕೋಟಿಯ ಮತ್ತೊಂದು ಮಾನಹಾನಿ ಮೊಕದ್ದಮೆ ಹೂಡಿದ್ದಾರೆ.

ಜೇಟ್ಲಿ ಅವರು ಅಧ್ಯಕ್ಷರಾಗಿದ್ದಾಗ ದೆಹಲಿ ಜಿಲ್ಲಾ ಕ್ರಿಕೆಟ್‌ ಸಂಸ್ಥೆಯಲ್ಲಿ (ಡಿಡಿಎ) ಅವ್ಯವಹಾರ ನಡೆದಿದೆ ಎಂದು ಕೇಜ್ರಿವಾಲ್‌ ಅರೋಪಿಸಿದ್ದರು. ಕೇಜ್ರಿವಾಲ್‌ ಮತ್ತು ಎಎಪಿಯ ಐವರು ಮುಖಂಡರ ವಿರುದ್ಧ ಜೇಟ್ಲಿ ಅವರು ದಾಖಲಿಸಿರುವ ಮಾನನಷ್ಟ ಮೊಕದ್ದಮೆ ವಿಚಾರಣೆ ನಡೆಯುತ್ತಿದೆ.

ಕಳೆದ ಬುಧವಾರ ಈ ಪ್ರಕರಣದ ಪಾಟೀಸವಾಲು ಸಂದರ್ಭದಲ್ಲಿ ಕೇಜ್ರಿವಾಲ್‌ ಪರ ವಕೀಲ ರಾಮ್‌ ಜೇಠ್ಮಲಾನಿ ಅವರು ಜೇಟ್ಲಿ ಅವರನ್ನು ‘ಠಕ್ಕ’ ಎಂದು ಕರೆದಿದ್ದರು. ಕೇಜ್ರಿವಾಲ್‌ ಸೂಚನೆಯಂತೆ ಈ ಪದ ಬಳಸಿರುವುದಾಗಿಯೂ ಅವರು ಹೇಳಿದ್ದರು.

ವಿಚಾರಣೆ ವೇಳೆ ಜೇಠ್ಮಲಾನಿ ಅವರು ಮಿತಿ ಮೀರುತ್ತಿದ್ದಾರೆ ಎಂದು ವಿಚಾರಣೆ ನಡೆಸುತ್ತಿದ್ದ ಹೈಕೋರ್ಟ್‌ನ ಜಂಟಿ ರಿಜಿಸ್ಟ್ರಾರ್‌ ದೀಪಾಲಿ ಶರ್ಮಾ ಅವರು ಎಚ್ಚರಿಸಿದ್ದರು.

‘ಠಕ್ಕ’ ಎಂಬ ಪದ ಬಳಸಲು ಕೇಜ್ರಿವಾಲ್‌ ಅವರೇ ಹೇಳಿದ್ದರಿಂದಾಗಿ ಅವರ ವಿರುದ್ಧ ಮಾನನಷ್ಟದ ಮತ್ತೊಂದು ಪ್ರಕರಣ ದಾಖಲಿಸುವುದಾಗಿ ಜೇಟ್ಲಿ ಅವರು ವಿಚಾರಣೆ ಸಂದರ್ಭದಲ್ಲಿಯೇ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT