ನವದೆಹಲಿ: ವಿಚ್ಛೇದನಕ್ಕೆ ತ್ರಿವಳಿ ತಲಾಖ್ ಆಯ್ಕೆಯನ್ನು ಬಳಸಿಕೊಳ್ಳುವುದಿಲ್ಲ ಎಂದು ಮದುವೆ ಸಂದರ್ಭದಲ್ಲಿಯೇ ಮದುವೆ ಗಂಡಿನಿಂದ ಭರವಸೆ ಪಡೆದುಕೊಳ್ಳುವಂತೆ ಖಾಜಿಗಳಿಗೆ (ಧರ್ಮಗುರು) ಶೀಘ್ರ ಸೂಚನೆ ನೀಡಲಾಗುವುದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ. ತ್ರಿವಳಿ ತಲಾಖ್ ಬಳಸಿದವರಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗುವುದು ಎಂದೂ ತಿಳಿಸಿದೆ.
ತ್ರಿವಳಿ ತಲಾಖ್ ಆಯ್ಕೆಯನ್ನು ಬಳಸಿಕೊಳ್ಳುವುದಿಲ್ಲ ಎಂಬ ವಿಚಾರವನ್ನು ನಿಖಾನಾಮಾದಲ್ಲಿ (ವಿವಾಹ ಒಪ್ಪಂದ) ಸೇರಿಸುವಂತೆ ವಧು ಮತ್ತು ವರನಿಗೆ ಖಾಜಿ ತಿಳಿಸಲಿದ್ದಾರೆ ಎಂದು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಹೇಳಿದೆ.
ಮಹಿಳೆಯರ ಅಭಿಪ್ರಾಯಗಳಿಗೂ ಮನ್ನಣೆ ನೀಡಲು ಮಂಡಳಿ ಮುಂದಾಗಿದೆ. ಆದರೆ ತ್ರಿವಳಿ ತಲಾಖ್ ಪದ್ಧತಿಯನ್ನು ನಿರ್ಮೂಲನೆ ಮಾಡುವ ಬಗ್ಗೆ ಏನನ್ನೂ ಹೇಳಿಲ್ಲ.
ತ್ರಿವಳಿ ತಲಾಖ್ನ ಸಾಂವಿಧಾನಿಕ ಸಿಂಧುತ್ವದ ಬಗೆಗಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೇಹರ್ ನೇತೃತ್ವದ ಸಂವಿಧಾನ ಪೀಠ ಕಳೆದ ಗುರುವಾರ ಪೂರ್ಣಗೊಳಿಸಿದೆ. ತ್ರಿವಳಿ ತಲಾಖ್ ಕೈಬಿಡುವಂತೆ ಖಾಜಿಗಳಿಗೆ ಸೂಚನೆ ನೀಡುವುದಾಗಿ ವಿಚಾರಣೆಯ ಕೊನೆಯಲ್ಲಿ ಮಂಡಳಿ ಹೇಳಿತ್ತು.
ಪೀಠವು ತೀರ್ಪನ್ನು ಕಾಯ್ದಿರಿಸಿದೆ.
ಜಾಗೃತಿ ಅಭಿಯಾನ
* ಸಾರ್ವಜನಿಕ ಆಂದೋಲನಕ್ಕೆ ಮಂಡಳಿ ಸಿದ್ಧತೆ
* ವೆಬ್ಸೈಟ್, ಪ್ರಕಟಣೆಗಳು, ಸಾಮಾಜಿಕ ಜಾಲತಾಣ ಮೂಲಕ ಖಾಜಿಗಳಿಗೆ ಮಾಹಿತಿ
* ದಂಪತಿ ನಡುವಣ ಮನಸ್ತಾಪ ಪರಸ್ಪರ ಚರ್ಚೆ ಮೂಲಕ ಬಗೆಹರಿಸಲು ಸೂಚನೆ