ಕಲಬುರ್ಗಿ: ರಾಷ್ಟ್ರೀಯ ಡೆಂಗಿ ದಿನಾಚರಣೆ ಅಂಗವಾಗಿ ಇಲ್ಲಿನ ಸರ್ಕಾರಿ ಶುಶ್ರೂಷಕರ ಕಾಲೇಜಿನ ವಿದ್ಯಾರ್ಥಿ ನಿಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ನಗರದಲ್ಲಿ ಸೋಮವಾರ ಜಾಗೃತಿ ಜಾಥಾ ನಡೆಸಿದರು.
‘ಡೆಂಗಿ ನಿಯಂತ್ರಣ ಎಲ್ಲರ ಜವಾಬ್ದಾರಿ’, ‘ನೀರು ನಿಲ್ಲದಂತೆ ಎಚ್ಚರ ವಹಿಸಿ–ಡೆಂಗಿ ಜ್ವರದಿಂದ ಪಾರಾಗಿ’, ‘ಸೊಳ್ಳೆ ಪರದೆ ಬಳಸಿ–ರೋಗದಿಂದ ಮುಕ್ತರಾಗಿ’ ಎಂಬ ಘೋಷಣೆ ಕೂಗಿದರು. ಜಾಥಾ ನಗರದ ವಿವಿಧ ಪ್ರದೇಶಗಳಲ್ಲಿ ಸಂಚರಿಸಿತು.
ಜಾಥಾಕ್ಕೆ ಚಾಲನೆ: ನಗರದ ಜಿಲ್ಲಾಸ್ಪತ್ರೆ ಆವರಣದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ದೇವಕಮ್ಮ ಹಿರೇಮಠ ಚಾಲನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಶಿವರಾಜ ಸಜ್ಜನಶೆಟ್ಟಿ, ಜಿಲ್ಲಾ ಆಸ್ಪತ್ರೆಯ ಜಿಲ್ಲಾ ಶಸ್ತ್ರಜ್ಞ ಡಾ. ಬಾಲಚಂದ್ರ ಜೋಶಿ, ಡಾ. ಬಸವರಾಜ ಗುಳಗಿ ಇದ್ದರು.