ಧಾರವಾಡ: ‘ತಾಲ್ಲೂಕಿನ ಅತ್ತಿಕೊಳ್ಳದ ಜಮ್ಮುವೇರ್ ಫ್ಯಾಕ್ಟರಿಯ ಹದಿನಾರು ಎಕರೆ ಜಾಗದಲ್ಲಿ ನಿವೇಶನ ಅಭಿವೃದ್ಧಿ ನಡೆಯುತ್ತಿದೆ. ಇದರಿಂದ ಜಾಂಬವಂತ ನಗರದ ನಿವಾಸಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ’ ಎಂದು ಆರೋಪಿಸಿ ಸ್ಥಳೀಯರು ಸೋಮವಾರ ಪ್ರತಿಭಟನೆ ನಡೆಸಿದರು.
ಮಧ್ಯಾಹ್ನ ಕಾಂಪೌಂಡ್ ಕೆಲಸ ನಡೆಯುತ್ತಿದ್ದ ಸ್ಥಳಕ್ಕೆ ಬಂದ ಪ್ರತಿಭಟನಾಕಾರರು ಘೋಷಣೆ ಕೂಗಲು ಆರಂಭಿಸಿದರು. ಕೂಡಲೇ ಅಲ್ಲಿನ ಕಟ್ಟಡ ಕಾರ್ಮಿಕರು ಪೊಲೀಸರಿಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿ ತಿಳಿಗೊಳಿಸಿದರು.
‘ಐದು ಸಾವಿರಕ್ಕೂ ಹೆಚ್ಚು ಜನ ಇಲ್ಲಿ ವಾಸ ಮಾಡುತ್ತಿದ್ದಾರೆ. ಬಹುತೇಕರು ಕಾರ್ಮಿಕರಿದ್ದಾರೆ. ಸ್ವಂತ ವಾಹನ ಇಲ್ಲದವರು ನಾಲ್ಕು ಕಿ.ಮೀ. ನಡೆದುಕೊಂಡು ಬರಬೇಕು. ಸಂಬಂಧಿಸಿದ ಜನಪ್ರತಿನಿಧಿಗಳು ಗಮನಿಸಿ, ನಮಗೆ ದಾರಿ ಕಲ್ಪಿಸಬೇಕು’ ಎಂದು ಒತ್ತಾಯ ಮಾಡಿದರು.
‘ಈ ಮಾರ್ಗ ದಾಟಿಯೇ ಬಡ ಮಕ್ಕಳು ಸಿದ್ಧರಾಮೇಶ್ವರ ನಗರದಲ್ಲಿನ ಶಾಲಾ, ಕಾಲೇಜಿಗೆ ತೆರಳಬೇಕು. ಈಗ ಕಾಂಪೌಂಡ್ ಕಟ್ಟುವುದರಿಂದ ಸಮಸ್ಯೆ ಯಾಗುತ್ತದೆ. ಕೆಲ ಜನಪ್ರತಿನಿಧಿಗಳು ನಾವು ವಿರೋಧಿಸುವುದಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ. ಬಡ, ದಲಿತ ಜನರಿಗೆ ನ್ಯಾಯ ಒಸಗಿಸಬೇಕು. ಇಲ್ಲವಾದರೆ, ಪಾಲಿಕೆ ಕಚೇರಿ ಎದುರು ಧರಣಿ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.
‘ಸಮಸ್ಯೆ ಕುರಿತು ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಲಾಗಿದೆ’ ಎಂದು ಜಾಂಬವಂತ ನಗರ ನಿವಾಸಿಗಳ ಸಂಘದ ಅಧ್ಯಕ್ಷ ನಾರಾಯಣ ನಾಗೂರ ತಿಳಿಸಿದರು. ಮುಖಂಡರಾದ ವೆಂಕಟೇಶ ಸಗಬಾಲ, ರಾಮಚಂದ್ರ ಪೋದಡ್ಡಿ, ಚಿಂತಣ್ಣ ಸಗಬಾಲ, ನಾರಾಯಣಸ್ವಾಮಿ ಕತ್ತಿ, ಆರ್.ಪಿ. ಮುನವಳ್ಳಿ ಇದ್ದರು.