ಹುಬ್ಬಳ್ಳಿ: ವಿಚಾರಣೆಗೆಂದು ಮಹಿಳೆಯೊಬ್ಬರನ್ನು ಉಪನಗರ ಠಾಣೆ ಪೊಲೀಸರು ಸೋಮವಾರ ಕರೆಯಿಸಿಕೊಂಡು ಇಡೀ ರಾತ್ರಿ ಆಕೆಯನ್ನು ಠಾಣೆಯಲ್ಲಿಯೇ ಇರಿಸಿದ್ದ ಪ್ರಕರಣ ವರದಿಯಾಗಿದೆ.
ನಗರದ ಮಂಗಳಾ ಓಣಿಯ ಯುವತಿ ಈಚೆಗೆ ಕಾಣೆಯಾಗಿದ್ದರು. ಈ ಸಂಬಂಧ ಪೋಷಕರು ಉಪ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗದಗದಲ್ಲಿ ಯುವಕನೊಬ್ಬನನ್ನು ಪ್ರೇಮ ವಿವಾಹವಾಗಿದ್ದ ಯುವತಿ ಸೋಮವಾರ ಗದಗ ಪೊಲೀಸರ ಕೈಗೆ ಸಿಕ್ಕಿದ್ದರು.
ವಿಷಯ ತಿಳಿದ ಉಪನಗರ ಠಾಣೆ ಪೊಲೀಸರು ಆಕೆಯನ್ನು ವಿಚಾರಣೆಗೆಂದು ರಾತ್ರಿ 10.30ಕ್ಕೆ ಕರೆಯಿಸಿಕೊಂಡು, ಠಾಣೆಯಲ್ಲೇ ಇರಿಸಿಕೊಂಡಿರುವುದಾಗಿ ತಿಳಿದುಬಂದಿದೆ.
‘ವಿಚಾರಣೆಗಾಗಿ ಮಹಿಳೆಯನ್ನು ರಾತ್ರಿ ಕರೆಸಿಕೊಂಡಿರಲಿಲ್ಲ. ಮಂಗಳವಾರ ಬೆಳಿಗ್ಗೆ 6 ಗಂಟೆಗೆ ಕರೆಸಲಾಗಿತ್ತು. ವಿಚಾರಣೆ ಬಳಿಕ ಆಕೆಯನ್ನು ಘಂಟಿಕೇರಿಯ ಮಹಿಳಾ ಕೇಂದ್ರಕ್ಕೆ ಕಳುಹಿಸಲಾಗಿದೆ’ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.
‘ಮಹಿಳೆಯೊಬ್ಬರನ್ನು ವಿಚಾರಣೆಗೆಂದು ಠಾಣೆಗೆ ಕರೆಯಿಸಿಕೊಂಡಿದ್ದ ಬಗ್ಗೆ ಮಾಹಿತಿ ಇದೆ. ಆದರೆ, ಇಡೀ ರಾತ್ರಿ ಅಲ್ಲಿಯೇ ಇರಿಸಿಕೊಂಡಿದ್ದರ ಕುರಿತು ಯಾವುದೇ ಮಾಹಿತಿ ಇಲ್ಲ. ಈ ಸಂಬಂಧ ತನಿಖೆ ನಡೆಸಿ, ವರದಿ ನೀಡುವಂತೆ ಸೂಚಿಸಲಾಗಿದೆ’ ಎಂದು ಪೊಲೀಸ್ ಕಮಿಷನರ್ ಪಾಂಡುರಂಗ ರಾಣೆ ತಿಳಿಸಿದರು.