ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಯೋಜನೆಗಳ ಅನುಷ್ಠಾನಕ್ಕಾಗಿ ವೈಯಕ್ತಿಕ ಸಮಾಲೋಚನೆ ಆಧಾರದ ಮೇರೆಗೆ ನಿವೃತ್ತ ಅಧಿಕಾರಿಗಳ ಸೇವೆ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಉಜ್ವಲಕುಮಾರ್ ಘೋಷ್ ತಿಳಿಸಿದ್ದಾರೆ.
ತಾಂತ್ರಿಕ ಸಲಹೆಗಾರ ಹುದ್ದೆಗೆ ನಿವೃತ್ತ ಮುಖ್ಯ ಎಂಜಿನಿಯರ್/ ಸೂಪರಿಂ ಟೆಂಡಿಂಗ್ ಎಂಜಿನಿಯರ್ ಅಥವಾ ಕನಿಷ್ಠ 15 ವರ್ಷಗಳ ಅನುಭವವುಳ್ಳ ಎಂಜಿನಿಯರಿಂಗ್ ಕಾಲೇಜಿನ ನಿವೃತ್ತ/ಕಾರ್ಯನಿರ್ವಹಿಸುತ್ತಿರುವ ಪ್ರಾಧ್ಯಾಪಕರು/ ಸಹ ಪ್ರಾಧ್ಯಾಪಕರು (ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯಿತಿ ಮತ್ತು ಮಹಾನಗರ ಪಾಲಿಕೆ ಕಾರ್ಯಾಲಯಗಳಿಗೆ-ಜಿಲ್ಲೆಗೆ ಒಬ್ಬರಂತೆ) ಅರ್ಹರಾಗಿದ್ದು, ತಿಂಗಳಿಗೆ ₹40 ಸಾವಿರ ಗೌರವಧನ ನೀಡಲಾಗುವುದು.
ಯೋಜನೆ ಅನುಷ್ಠಾನ ಮತ್ತು ಸಮನ್ವಯ ಅಧಿಕಾರಿ ಹುದ್ದೆಗೆ ನಿವೃತ್ತ ಜಿಲ್ಲಾಮಟ್ಟದ ಅಧಿಕಾರಿ (ಉಪ ನಿರ್ದೇಶಕರ ಹುದ್ದೆ ಮೇಲ್ಪಟ್ಟು) ಅರ್ಹರಾಗಿದ್ದು, ತಿಂಗಳಿಗೆ ₹30ಸಾವಿರ ಸಂಚಿತ ವೇತನ ನೀಡಲಾಗುವುದು.
ತಾಂತ್ರಿಕ ಅಧಿಕಾರಿ ಹುದ್ದೆಗೆ ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್/ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅರ್ಹರಾಗಿದ್ದು, ನಿವೃತ್ತ ಕಾರ್ಯನಿರ್ವಾಹಕ ಎಂಜಿನಿಯರ್ಗೆ ₹30 ಸಾವಿರ, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ಗೆ ₹20 ಸಾವಿರ ಗೌರವಧನ ನೀಡಲಾಗುವುದು.
ಲೆಕ್ಕ ಅಧೀಕ್ಷಕರ ಹುದ್ದೆಗೆ ನಿವೃತ್ತ ಲೆಕ್ಕ ಅಧೀಕ್ಷಕರು ಅರ್ಹರಾಗಿದ್ದು, ₹20ಸಾವಿರ ಸಂಚಿತ ವೇತನ ನೀಡಲಾಗುವುದು. ಅಭ್ಯರ್ಥಿಗಳನ್ನು ಮೌಖಿಕ ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿ ಹಾಗೂ ದಾಖಲೆಗ ಳೊಂದಿಗೆ ಮೇ 30ರಂದು ಬೆಳಿಗ್ಗೆ 10 ಗಂಟೆಗೆ ಕಲಬುರ್ಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಹಾಜರಿರಬೇಕು ಎಂದು ಅವರು ತಿಳಿಸಿದ್ದಾರೆ.
ಕೋಶ ಸ್ಥಾಪನೆ: ಹೈದರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯು ಕಚೇರಿ ಸಿಬ್ಬಂದಿ ಮತ್ತು ತಾಂತ್ರಿಕ ಬಲವರ್ಧನೆಗೆ ನಿರ್ಣಯಿಸಿದೆ. ಮಂಡಳಿಯು ಯೋಜನೆಗಳ ಅನು ಷ್ಠಾನಕ್ಕೆ ಸಹಕಾರಿಯಾಗಲು ಪ್ರತಿ ಜಿಲ್ಲಾ ಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಕಾರ್ಯಾಲಯದಲ್ಲಿ ಹಾಗೂ ಬಳ್ಳಾರಿ, ಕಲಬುರ್ಗಿ ಮಹಾನಗರ ಪಾಲಿಕೆಗಳಲ್ಲಿ ಕೋಶ ಸ್ಥಾಪಿಸಿ, ಪ್ರತ್ಯೇಕವಾಗಿ ವೈಯಕ್ತಿಕ ಸಮಾಲೋಚನೆ ಆಧಾರದ ಮೇರೆಗೆ ನುರಿತ ಸಿಬ್ಬಂದಿ ಮತ್ತು ತಾಂತ್ರಿಕ ಸಿಬ್ಬಂದಿ ಸೇವೆ ಪಡೆದುಕೊಳ್ಳಲು ಅನುಮತಿ ನೀಡಿ ಮಂಡಳಿಯ ಕಾರ್ಯದರ್ಶಿ ಅವರು ಆದೇಶಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.