ಆಲಮೇಲ: ಬೇಸಿಗೆ ಬಂತೆಂದರೆ ಆಲಮೇಲ ಹೋಬಳಿಯ ಗ್ರಾಮಗಳಲ್ಲಿ ನೀರು ಬೇಡಿಕೆ ಹೆಚ್ಚಾಗುತ್ತದೆ. ಕೆಲಗ್ರಾಮಗಳಲ್ಲೂ ಕುಡಿಯುವ ನೀರಿಗೆ ಹಾಹಾಕಾರ ಶುರುವಾಗುತ್ತದೆ. ಪಶುಪಕ್ಷಿಗಳಿಗೂ ನೀರಿನ ಬವಣೆ ತಟ್ಟುತ್ತದೆ.
ಇಂತಹ ಬವಣೆಯನ್ನು ನೀಗಿಸಲು ಗುಂದಗಿ ಗ್ರಾಮದ ಶೋಭಾ ಪಾಟೀಲ ತಮ್ಮ 20 ಎಕರೆಯ ಜಮೀನಿನಲ್ಲಿ ಅರ್ಧ ಎಕರೆಯಷ್ಟು ವಿಶಾಲವಾದ ಕೃಷಿ ಹೊಂಡ ನಿರ್ಮಿಸಿ ನೀರಿನ ದಾಹ ತಣಿಸುತ್ತಿದ್ದಾರೆ.
ಬೇಸಿಗೆಯಲ್ಲಿ ತಮ್ಮ ಹೊಲದ ಸುತ್ತ ಎತ್ತು, ದನಕರುಗಳು ನೀರಿನ ಸೆಲೆ ನೋಡಿ ತಿರುಗಾಡು ವುದನ್ನು ಕಂಡ ಅವರು, ₹ 5 ಲಕ್ಷ ವೆಚ್ಚದಲ್ಲಿ ಕೃಷಿ ಹೊಂಡ ನಿರ್ಮಿಸಿ, ಜಾನುವಾರುಗಳಿಗೆ ನೀರುಣಿಸುತ್ತಿದ್ದಾರೆ.
‘ಬೇಸಿಗೆಯಲ್ಲಿ ನಮ್ಮ ಹೊಲದಲ್ಲಿ ಯಾವುದೇ ಪ್ರಮುಖ ಬೆಳೆಯಿಲ್ಲ. ಪ್ರಾಣಿಗಳು ನೀರಿನ ತೊಂದರೆಯಿಂದ ಬಳಲಬಾರದು ಎಂದು ಹೊಂಡ ನಿರ್ಮಿಸಲು ಯೋಚಿಸಿದೆ. ಪತಿ ವಿಶ್ರಾಂತ ಪ್ರಾಚಾರ್ಯ ಎ.ಸಿ.ಪಾಟೀಲ ಅವ ರೊಂದಿಗೆ ಮನದಾಳದ ಮಾತನ್ನು ಹೇಳಿದೆ. ಅವರು ಒಪ್ಪಿಕೊಂಡು ಈ ಕೃಷಿಹೊಂಡ ನಿರ್ಮಿಸಿ ದರು’ ಎಂದು ಶೋಭಾ ಪಾಟೀಲ ಹೇಳಿದರು.
ಸದ್ಯ ಹೊಲಕ್ಕೆ ಬೇಸಿಗೆಯಲ್ಲಿ ನೀರು ಬೇಕಾಗಿಲ್ಲ. ಆದರೂ, ದನಕರುಗಳಿಗೆ ಅನುಕೂಲವಾಗುವಂತೆ 35 ಅಡಿ ಆಳ, 120 ಅಡಿ ಉದ್ದ, 110 ಅಡಿ ಅಗಲವಾದ ಕೃಷಿಹೊಂಡ ನಿರ್ಮಿಸಿ, ಮಳೆಗಾಲದಲ್ಲಿ ನೀರು ಸಂಗ್ರಹಿಸಿ ದನಕರುಗಳಿಗೆ ಕುಡಿಯುವಂತೆ ಮಾಡಲಾಗಿದೆ.
‘20 ಎಕರೆಯ ಹೊಲಕ್ಕೆ ಸಾಕಾಗುವಷ್ಟು ದೊಡ್ಡ ಹೊಂಡ ನಿರ್ಮಿಸಿದ್ದೇನೆ. ಬರುವ ವರ್ಷ ದಲ್ಲಿ ಇಲ್ಲಿನ ನೀರನ್ನು ನೀರಾವರಿ ಆಧಾರಿತ ಬೆಳೆಗೆ ಉಪಯೋಗಿಸಿಕೊಳ್ಳುತ್ತೇವೆ. ಈಗ ನೀರು ದನುಕರುಗಳಿಗೆ ಉಪಯೋಗಕ್ಕೆ ಇದೆ’ ಎಂದರು.
ಕೃಷಿ ಹೊಂಡಕ್ಕೆ ವಿಪರೀತ ವೆಚ್ಚವಾಗುತ್ತದೆ ಎಂದು ಗ್ರಾಮದ ಅನೇಕರು ಕೊಳವೆಬಾವಿಗೆ ಹೊರೆಯಹೋಗಿದ್ದರು. ಆದರೆ, ಅದರಲ್ಲಿ ನೀರು ಬತ್ತಿ ಹೋಗುತ್ತಿದೆ. ಶೋಭಾ ಪಾಟೀಲರ ಯಶಸ್ಸಿನಿಂದ ಸ್ಫೂರ್ತಿಗೊಂಡು ಗ್ರಾಮದ ಇಬ್ಬರು ರೈತರು ಸಣ್ಣ ಪ್ರಮಾಣದಲ್ಲಿ ಕೃಷಿಹೊಂಡ ನಿರ್ಮಿಸಿಕೊಂಡು, ನೀರು ಸಂಗ್ರಹಿಸಿ ಬೆಳೆಗೆ ಉಣಿಸುತ್ತಿದ್ದಾರೆ.
ರಮೇಶ ಎಸ್.ಕತ್ತಿ