ಹುಬ್ಬಳ್ಳಿ: ‘ಸಮಾಜದ ಋಣ ನಮ್ಮೆಲ್ಲರ ಮೇಲಿದೆ. ಅದನ್ನು ತೀರಿಸುವ ಕೆಲಸವನ್ನು ಎಲ್ಲರೂ ಮಾಡಬೇಕು’ ಎಂದು ಪ್ರಧಾನ ಮತ್ತು ಸತ್ರ ನ್ಯಾಯಾಧೀಶ ವಿ. ಶ್ರೀಶಾನಂದ ಹೇಳಿದರು. ಹುಬ್ಬಳ್ಳಿಯಲ್ಲಿ ಮಂಗಳವಾರ ವಕೀಲರ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ನಾನು ಎನ್ನುವ ಅಹಂಕಾರವನ್ನು ಸುಡಬೇಕು. ವಿದ್ಯೆ ಹಂಚಿದಷ್ಟು ಬೆಳೆಯುತ್ತದೆ. ವಿದ್ಯೆ ಸರ್ವತ್ರ ಸಾಧನೆಯ ಮಾರ್ಗವಾಗಿದೆ ಎಂದರು. ಕಕ್ಷಿದಾರರಿಗೆ ಅನುಕೂಲ ಆಗಬೇಕು. ಅವರಿದ್ದರೆ, ನಾವು ಎನ್ನುವುದನ್ನು ಅರಿತುಕೊಳ್ಳಬೇಕು. ವಕೀಲ ವೃತ್ತಿ ನೋಬಲ್ ವೃತ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಂಕು–ಡೊಂಕು ಕಂಡು ಬರುತ್ತಿದೆ. ಅದರ ಘನತೆ ಕಾಪಾಡುವ ಕೆಲಸ ಆಗಬೇಕು ಎಂದು ಹೇಳಿದರು.
ನ್ಯಾಯಾಂಗದ ಇತಿಹಾಸದಲ್ಲಿ ಸಣ್ಣ, ಸಣ್ಣ ಕೆಲಸ ಮಾಡಿದ್ದೇನೆ. ಹೈಕೋರ್ಟ್ನಲ್ಲಿ ಇ–ಲೈಬ್ರರಿ ಆರಂಭಿಸಬೇಕು. ಇದಕ್ಕೆ ಬೇಕಾದ ಸಹಕಾರವನ್ನು ನೀಡುವುದಾಗಿ ಸಂಸದ ಪ್ರಹ್ಲಾದ ಜೋಶಿ ಹೇಳಿದ್ದಾರೆ. ತೀರ್ಪು ನೀಡುವಾಗ ಕಠಿಣ ನಿಲುವು ತೆಗೆದುಕೊಂಡಿದ್ದೇನೆ. ಅದರಿಂದ ಯಾರಿಗಾದರೂ ತೊಂದರೆಯಾಗಿದ್ದರೆ, ಅದು ತಾತ್ಕಾಲಿಕ ಮಾತ್ರ ಎಂದರು.
ವಕೀಲರ ಸಂಘದ ಅಧ್ಯಕ್ಷ ಡಿ.ಎಂ. ನರಗುಂದ ಮಾತನಾಡಿ, ಹೈಕೋರ್ಟ್ ಕಟ್ಟಡ ನಿರ್ಮಾಣದಲ್ಲಿ ನ್ಯಾಯಾಧೀಶ ಶ್ರೀಶಾನಂದ ಅವರ ಶ್ರಮ ದೊಡ್ಡದಿದೆ. ಅವರ ಅಧ್ಯಯನಶೀಲತೆ ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು. ನ್ಯಾಯಾಧೀಶರಾದ ಮಂಜುಳಾ ಹುಂಡಿ, ಕಲ್ಕುಣಿ, ಕಿರಣ ಹಾಗೂ ಅಶೋಕ ಅಣ್ವೇಕರ್ ಇದ್ದರು.