ತೋರಣಗಲ್ (ಸಂಡೂರು): ತಾಲ್ಲೂಕಿನ ತೋರಣಗಲ್ ಹಾಗೂ ಮುಸಿನಾಯಕನಹಳ್ಳಿ ಗ್ರಾಮ ವ್ಯಾಪ್ತಿ ಯಲ್ಲಿ ಪೇಂಟ್ಸ್ ಹಾಗೂ ಎಮಲ್ಷನ್ ಕೊ ಪಾಲಿಮರ್ ತಯಾರಿಕಾ ಘಟಕ ಸ್ಥಾಪನೆ ಕುರಿತಂತೆ ಮಂಗಳವಾರ ಕರೆದಿದ್ದ ಸಾರ್ವಜನಿಕ ಸಭೆಯಲ್ಲಿ ಪರ ವಿರೋಧ ಗುಂಪುಗಳ ನಡುವೆ ವಾಗ್ವಾದ ನಡೆಯಿತು.
ಉದ್ದೇಶಿತ ಕಾರ್ಖಾನೆಯ ರೂಪು ರೇಷೆ, ಕಾರ್ಯ ವಿಧಾನ ಮತ್ತು ಉಪಯೋಗದ ಕುರಿತು ಕಾರ್ಖಾನೆ ಅಧಿಕಾರಿ ಕದಂ ಅವರು ವಿವರಿಸುತ್ತಿ ದ್ದಂತೆ ವಿವಿಧ ಸಂಘಟನೆ ಮುಖಂಡರು ವಿರೋಧ ವ್ಯಕ್ತಪಡಿಸಿದರು.
ಪಿಐಎಂ, ಕರವೇ, ಭಗತ್ಸಿಂಗ್ ಯುವಕ ಸಂಘ, ಡಿವೈಎಫ್ಐ ಸಂಘ ಟನೆಗಳ ಮುಖಂಡರಾದ ಟಿ.ಕೆ. ಕಾಮೇಶ್, ಎ. ಸ್ವಾಮಿ, ಎಸ್. ಕಾಲುಬಾ, ಜೆ.ಎಂ. ಚನ್ನಬಸಯ್ಯ, ಬಿ. ಪೋಲಪ್ಪ, ವಿ.ಎಸ್. ಶಿವಶಂಕರ್, ಕೆ. ಜಂಗ್ಲಿಸಾಬ್, ಬಸವರಾಜ, ಬಿ. ಲೋಕೇಶ್, ಬಸಮ್ಮ ವಾಲ್ಮೀಕಿ ವಿರೋಧ ವ್ಯಕ್ತಪಡಿಸಿ ಮಾತನಾಡಿದರು. ನಾವು ಕೈಗಾರಿಕಾ ಸ್ಥಾಪನೆ ವಿರೋಧಿಗಳಲ್ಲ. ಈ ಹಿಂದೆ ಇಲ್ಲಿಯೇ ಉಕ್ಕಿನ ಕಾರ್ಖಾನೆ ಸ್ಥಾಪನೆ ಯಾಗಬೇಕು ಎಂದು ಹೋರಾಟ ಮಾಡಿ ದ್ದವರು. ನಮಗೇನಿದ್ದರೂ ಪರಿಸರ ಸ್ನೇಹಿ ಹಾಗೂ ಬದುಕು ಹಸನು ಮಾಡುವ ಕಾರ್ಖಾನೆಗಳು ಬೇಕಿವೆ ಎಂದು ಹೇಳಿದರು.
ಇಲ್ಲಿ ಸ್ಥಾಪಿಸಿರುವ ಡಾಂಬರು ಕಾರ್ಖಾನೆ ಹಾಗೂ ಉದ್ದೇಶಿತ ಪೇಂಟ್ಸ್ ಕಾರ್ಖಾನೆಯಿಂದ ಪರಿಸರ ಮಲಿನ ವಾಗಲಿದೆ. ಕಾರ್ಖಾನೆ ತ್ಯಾಜ್ಯದಿಂದ ಈಗಾಗಲೇ ದರೋಜಿ ಕೆರೆ ಹಾಳಾಗಿದೆ. ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ ಕರಡಿ ಧಾಮವಿರುವ ಈ ಜಾಗದಲ್ಲಿ ಪೇಂಟ್ಸ್ ಕಾರ್ಖಾನೆ ಸ್ಥಾಪಿಸಿದರೆ ಕರಡಿ ಸಂತತಿ ವಿನಾಶ ಆಗಲಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಉಕ್ಕು ಕಾರ್ಖಾನೆ ಸ್ಥಾಪಿಸಲು ಒತ್ತಾಯಿಸಿದ ಹಲವು ರೈತರು, ಸ್ಥಳೀಯ ರಿಗೆ ಉದ್ಯೋಗ ಸಿಕ್ಕಿಲ್ಲ. ಸರೋಜಿನ ಮಹಿಷಿ ವರದಿ ಅನುಷ್ಠಾನವಾಗಿಲ್ಲ ಎಂದು ದೂರಿದರು. ಸಾರ್ವಜನಿಕ ಸಭೆಯ ಬಗ್ಗೆ ಜನರಿಗೆ ಸರಿಯಾದ ಮಾಹಿತಿ ಇಲ್ಲ. ಗ್ರಾಮಗಳಲ್ಲಿ ಡಂಗೂರ ಹಾಕಿಸಿಲ್ಲ. ಸಾರ್ವಜನಿಕ ಸ್ಥಳದಲ್ಲಿ ಸಭೆ ನಡೆಸದೆ ಉದ್ದೇಶಿತ ಸ್ಥಾವರದ ಆವರಣದಲ್ಲಿ ನಡೆಸುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಕಾರ್ಖಾನೆ ಸ್ಥಾಪನೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳಾದ ಬಿ.ಎಸ್. ಗೋಪಾಲಕೃಷ್ಣ ಸಣ್ಣತಂಗಿ, ಕೆ.ಎಂ. ನಾಗರಾಜ್ ಸೇರಿದಂತೆ ತೋರಣಗಲ್, ತಾಳೂರು, ವಡ್ಡು, ಬಸಾಪುರ, ಸುಲ್ತಾನಾಪುರ, ಕುಡುತಿನಿ ಮುಂತಾದ ಗ್ರಾಮಗಳ ಮುಖಂಡರು, ಸಾರ್ವಜನಿಕರು ಭಾಗವಹಿಸಿದ್ದರು
ಉದ್ಯೋಗಕ್ಕಾಗಿ ಕಾರ್ಖಾನೆ ಬೇಕು
ಎಂ. ಶಬ್ಬೀರ್ಸಾಬ್, ಕೆ.ಎಂ. ಮುಲ್ಲಾ, ಸಿ.ಎಂ. ದುರುಗಯ್ಯ, ಡಿ. ಮಂಜುನಾಥ್, ಬಿ. ವೆಂಕಟೇಶ್ವರ ರೆಡ್ಡಿ, ಬಿ. ಗುರುಸ್ವಾಮಿ, ಅಬ್ದುಲ್ ಹೈ, ಎನ್. ಸೋಮಪ್ಪ ಸೇರಿ ಹಲವರು ಕಾರ್ಖಾನೆ ಸ್ಥಾಪನೆ ಪರವಾಗಿ ಮಾತನಾಡಿದರು.
ದೇಶದ ಅಭಿವೃದ್ಧಿಗೆ ಕಾರ್ಖಾನೆಗಳ ಅಗತ್ಯವಿದೆ. ಜಿಂದಾಲ್ ಕಾರ್ಖಾನೆಯಿಂದ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸಾವಿರಾರು ಕುಟಂಬಗಳು ಉದ್ಯೋಗ ಪಡೆದುಕೊಂಡಿವೆ. ಇಲ್ಲಿ ಕೈಗಾರಿಕೆ ಗಳು ಸ್ಥಾಪನೆಯಾಗದರಿಂದ ಜನ ಗುಳೆ ಹೋಗುವುದು ತಪ್ಪಲಿದೆ. ಹೊಸ ಕೈಗಾರಿಕೆ ಸ್ಥಾಪನೆಯಿಂದ ಉದ್ಯೋಗ ಸೃಷ್ಠಿಯಾಗಲಿದೆ ಎಂದು ಹೇಳಿ ಕಾರ್ಖಾನೆ ಸ್ಥಾಪನೆಗೆ ಸಮ್ಮತಿ ಸೂಚಿಸಿದರು.
ಈ ವೇಳೆ ಎರಡೂ ಗುಂಪುಗಳ ನಡುವೆ ಮಾತಿನ ಚಕಮಕಿ ನಡೆಯಿತು. ಪೊಲೀಸರು ಹಾಗೂ ಅಧಿಕಾರಿಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ನಿಯಂತ್ರಿಸಿದರು. ಇದಕ್ಕೂ ಮುನ್ನ ಹೆಚ್ಚುವರಿ ಜಿಲ್ಲಾಧಿ ಕಾರಿ ವಿಜಯಮಹಾಂತೇಶ್ ದಾನಮ್ಮನವರ್ ಮಾತನಾಡಿ, ಎಲ್ಲರಿಗೂ ಅಭಿಪ್ರಾಯ ವ್ಯಕ್ತಪಡಿ ಸಲು ಅವಕಾಶವಿದೆ. ಎಲ್ಲರ ಅಭಿ ಪ್ರಾಯಗಳನ್ನು ಸಂಗ್ರಹಿಸಿ, ಜಿಲ್ಲಾಧಿಕಾರಿ ಮೂಲಕ ಕೇಂದ್ರ ಸರ್ಕಾರಕ್ಕೆ ಳುಹಿಸಿಕೊಡಲಾಗುವುದು ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.