ಮುಂಬೈ: ಕೆಲವೊಂದು ವಿಷಯಗಳ ಬಗ್ಗೆ ಮುಕ್ತವಾಗಿ ನನ್ನ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಲು ನನಗೆ ಭಯವಾಗುತ್ತಿದೆ. ಅದು ರಾಜಕೀಯ ವಿಷಯವೇ ಇರಲಿ ಅಥವಾ ಸಾಮಾಜಿಕ ವಿಷಯವೇ ಇರಲಿ. ಪ್ರಸ್ತುತ ಪರಿಸ್ಥಿತಿಯಲ್ಲಿ ನನ್ನ ಅಭಿಪ್ರಾಯಗಳನ್ನು ಹೇಳಲು ನಾನು ಹಿಂಜರಿಯುತ್ತೇನೆ ಅಂತಾರೆ ಬಾಲಿವುಡ್ ನಟ ಅರ್ಷದ್ ವಾರ್ಸಿ.
ಮುನ್ನಾ ಭಾಯಿ ಎಂಬಿಬಿಎಸ್, ಜಾಲಿ ಎಲ್ಎಲ್ಬಿ, ಗೋಲ್ ಮಾಲ್, ಇಷ್ಕಿಯಾ ಮೊದಲಾದ ಸಿನಿಮಾಗಳಲ್ಲಿ ಮಿಂಚಿದ್ದ ಅರ್ಷದ್ ವಾರ್ಸಿ, ಸಾಮಾಜಿಕ ತಾಣಗಳಲ್ಲಿನ ಟ್ರೋಲ್ಗಳಿಗೆ ಭಯ ಪಡುತ್ತಾರೆ.
ಈ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯೊಂದಿಗೆ ಮಾತನಾಡಿದ ವಾರ್ಸಿ, ಇಂಥಾ ವಿಷಯಗಳ ಬಗ್ಗೆ ಮಾತನಾಡುವುದೆಂದರೆ ನನಗೆ ನಡುಕ ಹುಟ್ಟುತ್ತದೆ. ಸಮಾಜದಲ್ಲಿನ ಯಾವುದೇ ವಿಷಯದ ಬಗ್ಗೆ ಸಾಮಾಜಿಕ ತಾಣಗಳಲ್ಲಿ ಅಭಿಪ್ರಾಯ ದಾಖಲಿಸುವುದೂ ನನಗೆ ಕಿರಿಕಿರಿಯನ್ನುಂಟು ಮಾಡುತ್ತದೆ.
ನೀವು ಸೆಲೆಬ್ರಿಟಿ ಆಗಿದ್ದರೆ ನಿಮ್ಮನ್ನು ಸುಮ್ಮನೆ ಬಿಡುವುದೇ ಇಲ್ಲ, ಸಾರ್ವಜನಿಕವಾಗಿ ನಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುವುದೂ ಸುರಕ್ಷಿತ ಅಲ್ಲ ಎಂಬ ಪರಿಸ್ಥಿತಿಯಲ್ಲಿ ಇಲ್ಲಿದೆ.
ಒಂದು ವೇಳೆ ಟ್ವೀಟರ್ನಲ್ಲಿ ನಾನಿವತ್ತು ಮಧ್ಯಾಹ್ನದ ಭೋಜನಕ್ಕೆ ಚಿಕನ್ ಬಿರಿಯಾನಿ ತಿಂದೆ ಎಂದು ಹೇಳಿದರೆ, ಜನರು ಪಾಕಿಸ್ತಾನಕ್ಕೆ ಹೋಗಿ ಅಂತಾರೆ. ಈ ಭಯ ನನಗಿದೆ. ನಾವೇನಾದರೂ ಹೇಳಿದರೆ, ಅದನ್ನು ಟ್ರೋಲ್ ಮಾಡಲಾಗುತ್ತದೆ. ಆ ಕಾರಣದಿಂದಲೇ ನಾನು ಸಾಮಾಜಿಕ ತಾಣಗಳಿಂದ ದೂರವಿದ್ದು ಖುಷಿಯಾಗಿದ್ದೇನೆ ಎಂದಿದ್ದಾರೆ.