ಹಾಸನ: ತಾಲ್ಲೂಕಿನ ಶಂಕರನಹಳ್ಳಿ ಗೇಟ್ ಸಮೀಪ ತುಂಡಾಗಿ ರಸ್ತೆಗೆ ಬಿದ್ದಿದ್ದ ವಿದ್ಯುತ್ ತಂತಿ ಮೇಲೆ ಮಂಗಳವಾರ ರಾತ್ರಿ ಬೈಕ್ ಸಾಗಿದ್ದರಿಂದ ವಿದ್ಯುತ್ ತಗುಲಿ ಮೂವರು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಗೋಪನಹಳ್ಳಿ ಗ್ರಾಮದ ರವಿ (56), ಪ್ರಸಾದ್ (23) ಮತ್ತು ಕಿಟ್ಟಿ (59) ಮೃತರು. ಇವರು ಹಾಸನದಿಂದ ಗ್ರಾಮಕ್ಕೆ ರಾತ್ರಿ ಹಿಂದಿರುಗುವಾಗ ಬಿರುಗಾಳಿ ಸಹಿತ ಮಳೆ ಬಂದಿದೆ.
ಶಂಕರನಹಳ್ಳಿ ಗೇಟ್ ಬಳಿ ವಿದ್ಯುತ್ ಪರಿವರ್ತಕದ ತಂತಿ ತುಂಡಾಗಿ ರಸ್ತೆಗೆ ಬಿದ್ದಿದೆ. ಬೈಕ್ ಓಡಿಸುತ್ತಿದ್ದ ರವಿ ಇದನ್ನು ಗಮನಿಸದೆ ತಂತಿ ಮೇಲೆ ಬೈಕ್ ಹತ್ತಿಸಿಕೊಂಡು ಹೋಗುತ್ತಿದ್ದಂತೆ ವಿದ್ಯುತ್ ತಗುಲಿದೆ. ಪರಿಣಾಮ, ಮೂವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.