ಈ ಜಾಗದ ಮೌಲ್ಯ ₹1,500 ಕೋಟಿ ಎಂದು ಅಂದಾಜಿಸಲಾಗಿದೆ. ಜೋಡಿದಾರ ಗ್ರಾಮವಾದ ಚಲಮಕುಂಟೆಯ ಈ ಜಾಗದ ಮಾಲೀಕತ್ವದ ಬಗ್ಗೆ ವಿವಾದವಿತ್ತು. ಎಚ್.ಕೆಂಪಯ್ಯ ಸೇರಿದಂತೆ 10 ಮಂದಿ ಈ ಜಾಗ ತಮಗೆ ಸೇರಿದ್ದು ಎಂದು ವಾದಿಸುತ್ತಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಬೆಂಗಳೂರು ಉತ್ತರ ಉಪವಿಭಾಗಾಧಿಕಾರಿ ಅವರ ನ್ಯಾಯಾಲಯವು, ‘ಅರ್ಜಿದಾರರ ಪೈಕಿ ಕೆಂಪಯ್ಯ ಅವರಿಗೆ ಮಾತ್ರ ಜಾಗದ ಹಕ್ಕು ಇದೆ. ಉಳಿದ ಅರ್ಜಿದಾರರು ಈ ಜಾಗದ ಮೇಲೆ ಯಾವುದೇ ಹಕ್ಕು ಹೊಂದಿಲ್ಲ’ ಎಂದು ಸೋಮವಾರ ಆದೇಶ ಹೊರಡಿಸಿತ್ತು.
ಜಿಲ್ಲಾಧಿಕಾರಿ ವಿ.ಶಂಕರ್, ಹೆಚ್ಚುವರಿ ಜಿಲ್ಲಾಧಿಕಾರಿ ಕಾಂತರಾಜು, ಉಪವಿಭಾಗಾಧಿಕಾರಿ ಕೆ.ರಂಗನಾಥ್ ನೇತೃತ್ವದಲ್ಲಿ ಜಾಗವನ್ನು ಕಂದಾಯ ಇಲಾಖೆಯ ವಶಕ್ಕೆ ಪಡೆಯಲಾಯಿತು.
‘ಕೆ.ಪಿ.ರಾಮಯ್ಯ ಈ ಗ್ರಾಮಕ್ಕೆ ಜೋಡಿದಾರರಾಗಿದ್ದರು. ಅವರು 1956ರಲ್ಲಿ ಕಾವೇರಿ ರೆಡ್ಡಿ ಎಂಬುವವರಿಗೆ ಇಡೀ ಗ್ರಾಮವನ್ನು ಮಾರಾಟ ಮಾಡಿದ್ದರು. ಅವರಿಂದ ಕೆಂಪಯ್ಯ ಅವರು 1956ರಲ್ಲೇ ಜಾಗವನ್ನು ಖರೀದಿಸಿದ್ದರು. 1973ರಿಂದಲೂ ಈ ಜಾಗಕ್ಕೆ ಸಂಬಂಧಿಸಿದ ವ್ಯಾಜ್ಯದ ವಿಚಾರಣೆ ನಡೆಯುತ್ತಿತ್ತು’ ಎಂದು ವಿ.ಶಂಕರ್ ಮಾಹಿತಿ ನೀಡಿದರು.
‘ಜೋಡಿದಾರ ಗ್ರಾಮದಲ್ಲಿ 1959ಕ್ಕಿಂತ ಮುಂಚೆ ಜಾಗ ಖರೀದಿಸಿದವರಿಗೆ ಮಾತ್ರ ಅದರ ಹಕ್ಕು ಲಭಿಸುತ್ತದೆ. 1964ರ ಇನಾಂ ರದ್ದತಿ ಕಾಯ್ದೆ ಪ್ರಕಾರ ಕೆಂಪಯ್ಯ ಅವರು ಮಾತ್ರ ಈ ಜಾಗದ ಮಾಲೀಕತ್ವ ಹೊಂದುವ ಅರ್ಹತೆ ಹೊಂದಿದ್ದಾರೆ. ಆದರೆ, ಅವರು ಗರಿಷ್ಠ 54 ಎಕರೆಯಷ್ಟು ಜಾಗವನ್ನಷ್ಟೇ ಹೊಂದಬಹುದು. ಹಾಗಾಗಿ ಅವರು ಬೇರೆ ಕಡೆ ಎಷ್ಟು ಜಾಗವನ್ನು ಹೊಂದಿದ್ದಾರೆ ಎಂಬುದನ್ನು ಪರಿಶೀಲಿಸಿ, ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಅವರಿಗೆ ಸೇರಬೇಕಾದಷ್ಟು ಜಾಗವನ್ನು ಬಿಟ್ಟುಕೊಡುತ್ತೇವೆ’ ಎಂದು ಅವರು ತಿಳಿಸಿದರು.