ಕಾರವಾರ: ವಿಆರ್ಎಲ್ ಬಸ್ ಹಾಗೂ ಮದುವೆ ದಿಬ್ಬಣದ ಟೆಂಪೋ ಹೊನ್ನಾವರ ತಾಲ್ಲೂಕಿನ ಅನಂತವಾಡಿ ಸಮೀಪದ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಗುರುವಾರ ಬೆಳಿಗ್ಗೆ ಮುಖಾಮುಖಿ ಡಿಕ್ಕಿಯಾಗಿದ್ದು, ಮದುಮಗಳು ಸೇರಿದಂತೆ ಆರು ಜನ ಸ್ಥಳದಲ್ಲೇ ಸಾವಿಗೀಡಾಗಿದ್ದು, 25 ಮಂದಿ ಗಾಯಗೊಂಡಿದ್ದಾರೆ.
ಮದುವೆ ದಿಬ್ಬಣದ ಟೆಂಪೋ ಶಿರಸಿ ತಾಲ್ಲೂಕಿನ ದಾಸನಕೊಪ್ಪದಿಂದ ಧರ್ಮಸ್ಥಳಕ್ಕೆ ಹೊರಟಿತ್ತು. ಬಸ್ ಮಂಗಳೂರಿನಿಂದ ಹೊನ್ನಾವರ ಕಡೆಗೆ ತೆರಳುತ್ತಿತ್ತು. ಬಸ್ ಮತ್ತು ಟೆಂಪೊ ಮಧ್ಯೆ ಅನಂತವಾಡಿ ಸಮೀಪದ ಹೆದ್ದಾರಿ 66ರಲ್ಲಿ ಬೆಳಿಗ್ಗೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ.
ಮದುಮಗಳು ದಿವ್ಯಾ ಕರ್ಡೇಕರ್(23) ಹಾಗೂ ವಿಆರ್ಎಲ್ ಬಸ್ ಚಾಲಕ ಉಮೇಶ್ ವಾಲ್ಮಿಕಿ(35), ಟೆಂಪೋದಲ್ಲಿದ್ದ ಪಾಲಾಕ್ಷಿ(42), ಬೇಬಿ(38) ಸುಬ್ರಹ್ಮಣ್ಯ(15), ಟೆಂಪೋ ಚಾಲಕ ನಾಗಪ್ಪ ಗಣಿಗಾರ್(48) ಅವರು ಸಾವಿಗೀಡಾಗಿದ್ದಾರೆ.
ಗಾಯಗೊಂಡವರನ್ನು ಭಟ್ಕಳದ ತಾಲ್ಲೂಕು ಆಸ್ಪತ್ರೆ ಹಾಗೂ ಮುರಡೇಶ್ವರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಉಡುಪಿ ಜಿಲ್ಲೆಯ ಮಣಿಪಾಲ್ ಹಾಗೂ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಸ್ಥಳಕ್ಕೆ ಭಟ್ಕಳ ಡಿವೈಎಸ್ಪಿ ಶಿವಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ. ಮಂಕಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.