ನಂಗಲಿ: ‘ಭ್ರಷ್ಟಾಚಾರ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣ ತೊಡಬೇಕು’ ಎಂದು ನಿವೃತ್ತ ಲೋಕಾಯುಕ್ತ ನ್ಯಾಯ ಮೂರ್ತಿ ಎನ್. ಸಂತೋಷ್ ಹೆಗ್ಡೆ ಸಲಹೆ ನೀಡಿದರು.
ಸಮೀಪದ ಟಿ.ನಡುಂಪಲ್ಲಿ ಗ್ರಾಮದಲ್ಲಿ ಮಾನವ ಹಕ್ಕುಗಳ ರಕ್ಷಣೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಂಸ್ಥೆಯಿಂದ ಇತ್ತೀಚೆಗೆ ನಡೆದ ‘ಹಸಿರು ಕ್ರಾಂತಿ’ ಸಸಿ ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
‘ದೇಶದ ಅಭಿವೃದ್ಧಿಗೆ ಭ್ರಷ್ಟಾಚಾರ ಅಡ್ಡಿಯಾಗುತ್ತಿದೆ. ಕೆಲವು ಭ್ರಷ್ಟ ರಾಜಕಾರಣಿಗಳು ಮತ್ತು ಅಧಿಕಾರಿಗಳಿಂದ ದೇಶದ ಅಭಿವೃದ್ಧಿಗೆ ಪೆಟ್ಟಾಗುತ್ತಿದೆ. ಆದ್ದರಿಂದ ಯುವಕರು ಭ್ರಷ್ಟಾಚಾರ ನಿರ್ಮೂಲನೆಗೆ ಮುಂದಾಗಬೇಕು’ ಎಂದು ತಿಳಿಸಿದರು.
‘ಜೀವನ ಶೈಲಿ ಮತ್ತು ಜಾಗತೀಕರಣ ಪ್ರಭಾವದಿಂದ ಪ್ರಕೃತಿ ನಶಿಸುತ್ತಿದೆ. ಪ್ರಕೃತಿ ಮಾಲಿನ್ಯ ತಡೆಗೆ ಗಿಡ,ಮರ ಬೆಳೆಸ ಬೇಕಾಗಿದೆ. ಇಲ್ಲದಿದ್ದರೆ ಭವಿಷ್ಯದಲ್ಲಿ ಆಪತ್ತು ಖಂಡಿತ ಸಂಭವಿಸುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.
ತಹಶೀಲ್ದಾರ್ ಬಿ.ಎನ್.ಪ್ರವೀಣ್ ಕುಮಾರ್, ಕಾರ್ಯನಿರ್ವಹಣಾಧಿಕಾರಿ ಎನ್. ವೆಂಕಟೇಶ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ದೇವರಾಜ್, ಅರಣ್ಯ ವಲಯಾಧಿಕಾರಿ ಸಂತೋಷ್ ಕುಮಾರ್, ಪ್ರಭಾರ ಅರಣ್ಯ ವಲಯಾಧಿಕಾರಿ ರಾಮಕೃಷ್ಣಪ್ಪ, ಸರ್ಕಲ್ ಇನ್ಸ್ಪೆಕ್ಟರ್ ಎ.ಸುಧಾಕರ್ ರೆಡ್ಡಿ, ಸಬ್ ಇನ್ಸ್ಪೆಕ್ಟರ್ ಬೈರಾ, ಬಿ.ಟಿ.ಗೋವಿಂದು, ಬಿ.ಎಲ್. ಶರತ್ ಕುಮಾರ್, ಅನ್ವರ್, ಮಾನವ ಹಕ್ಕುಗಳ ರಕ್ಷಣೆ ಮತ್ತು ನಿರ್ಮೂಲನೆಯ ಸಂಸ್ಥೆ ರಾಜ್ಯ ಘಟಕದ ಅಧ್ಯಕ್ಷ ಮಂಡಿ ಕಲ್ ನಾಗರಾಜ್, ನಿರ್ಮಲಾದೇವಿ, ಬಸವರಾಜಪ್ಪ, ಉಪಾಧ್ಯಕ್ಷ ಅಣ್ಣಿಹಳ್ಳಿ ಪ್ರಭಾಕರ್, ವೆಂಕಟರಾಮಯ್ಯ ಇದ್ದರು.