ಕಲಬುರ್ಗಿ: ನಗರದ ಹೀರಾಪುರ ಬಡಾವಣೆಯಲ್ಲಿ ರಾಜೀವ್ ಆವಾಸ್ ಯೋಜನೆ ಅಡಿ ನಿರ್ಮಿಸಲಾಗುತ್ತಿರುವ ಮನೆಗಳ ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸುವಂತೆ ಒತ್ತಾಯಿಸಿ ಸ್ಲಂ ಜನರ ಸಂಘಟನೆ– ಕರ್ನಾಟಕ ಜಿಲ್ಲಾ ಸಮಿತಿ ಸದಸ್ಯರು ಇಲ್ಲಿನ ಕರ್ನಾಟಕ ಕೊಳೆಗೇರಿ ಅಭಿವೃದ್ಧಿ ಮಂಡಳಿ ಕಚೇರಿ ಅಧಿಕಾರಿಗೆ ಬುಧವಾರ ಮನವಿ ಪತ್ರ ಸಲ್ಲಿಸಿದರು.
2015ರಲ್ಲೇ ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ. ಮೊದಲ ಹಂತದಲ್ಲಿ ಮಂಜೂರಾಗಿರುವ 485 ಮನೆಗಳ ಪೈಕಿ 355 ಫಲಾನುಭವಿಗಳು ವಂತಿಗೆ ಪಾವತಿಸಿದ್ದಾರೆ. ಆದರೆ ಶೇ 95ರಷ್ಟು ಮನೆಗಳು ಅಪೂರ್ಣ ಗೊಂಡಿವೆ. ಆದ್ದರಿಂದ ಶೀಘ್ರ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದರು.
2ನೇ ಹಂತದಲ್ಲಿ 131 ಫಲಾನುಭವಿ ಗಳ ಪೈಕಿ ಪರಿಶಿಷ್ಟ ಜಾತಿಯವರು ₹40,300, ಉಳಿದ ಜಾತಿಯವರು ₹1,00,750 ವಂತಿಗೆ ಪಾವತಿಸಬೇಕು ಎಂದು ಪಾಲಿಕೆ ಅಧಿಕಾರಿಗಳು ಸೂಚಿಸಿದ್ದಾರೆ. ಆದರೆ ಹಿಂದುಳಿದ ಮತ್ತು ಅಲ್ಪಸಂಖ್ಯಾತ ಸಮುದಾಯದವರು ವಂತಿಗೆ ಪಾವತಿಸಿಲ್ಲ.
ಈಚೆಗೆ ನಗರಕ್ಕೆ ಭೇಟಿ ನೀಡಿದ್ದ ವಸತಿ ಆಯುಕ್ತರು ಈ ಸಮುದಾಯದವರಿಗೆ ಕಂತುಗಳ ರೂಪದಲ್ಲಿ ಹಣ ಪಾವತಿಸಲು ಹೇಳಿದ್ದಾರೆ. ಆದರೆ ಪಾಲಿಕೆ ಅಧಿಕಾರಿಗಳು ಇದಕ್ಕೆ ಅವಕಾಶ ನೀಡದೆ ಅವರನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಿದರು.
ವಿಭಾಗೀಯ ಸಂಚಾಲಕ ಬಾಬುರಾವ ದಂಡಿನಕರ್, ನಗರ ಸಂಚಾಲಕ ಬ್ರಹ್ಮಾನಂದ ಮಿಂಚಾ, ಯುವ ದಲಿತ ಸೇನೆ ಜಿಲ್ಲಾ ಘಟಕದ ಅಧ್ಯಕ್ಷ ವಿಜಯಕುಮಾರ ಜೋಗುರ, ಮುಖಂಡರಾದ ಸುಬ್ಬರಾವ ಶ್ರೀಶೈಲ ಅಲೆಮಾರಿ, ಷಣ್ಮುಖ ತೆಲ್ಲೂರ, ಸೂರ್ಯಕಾಂತ ಕಡಗಂಚಿ, ಮಲ್ಲಿಕಾರ್ಜುನ ಕಾಂಬಳೆ ಇದ್ದರು.