ಶಕ್ತಿನಗರ: ಕಲುಷಿತ ನೀರು ಸೇವೆನೆಯಿಂದ ಸಮೀಪದ ಕೊರವಿಹಾಳ್ ಗ್ರಾಮದಲ್ಲಿ 26ಕ್ಕೂ ಹೆಚ್ಚು ಕುರಿಗಳು ಬುಧವಾರ ಮೃತಪಟ್ಟಿವೆ.
ಭೀಮಪ್ಪ ಅವರಿಗೆ ಸೇರಿದ 4, ಶಂಕ್ರಪ್ಪ–4, ಶಿವರಾಜ–8, ಸಾವಿತ್ರಿಮ್ಮ–4, ಶ್ಯಾಪಲ್ ಮಲ್ಲಪ್ಪ–3, ನಿಂಗಪ್ಪ –3 ಸೇರಿದಂತೆ 26ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿವೆ.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶಾರದಮ್ಮ ಬಾಲರಾಜ್, ಪಶುಸಂಗೋಪನಾ ಇಲಾಖೆಯ ತಾಲ್ಲೂಕು ಅಧಿಕಾರಿ ಪೋಮ್ಸಿಂಗ್, ಗ್ರಾಮ ಲೆಕ್ಕಾಧಿಕಾರಿ ಆನಂದರಾವ್, ಕಂದಾಯ ನಿರೀಕ್ಷಕ ರಾಮುಯಾದವ, ಪಶುವೈದ ವಾಲ್ಮೀಕಿ, ಮಹಾದೇವಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
‘ಮಳೆಯಿಲ್ಲದೆ ಬರಗಾಲ ಆವರಿಸಿದ್ದು, ಕುರಿಗಾಹಿಗಳ ಬದುಕು ಹೈರಾಣವಾಗಿದೆ. ಕುರಿಸಾಕಾಣಿಕೆಯನ್ನೇ ನಂಬಿರುವ ಕುರಿಗಾಹಿಗಳು, ಕುರಿಗಳ ಆಹಾರಕ್ಕಾಗಿ ಕಾಡು-ಮೇಡು ಎನ್ನದೇ ದಿಕ್ಕು-ದೆಸೆಯಿಲ್ಲದೇ ಅಲೆದಾಡುತ್ತಿದ್ದಾರೆ.
ನೀರಿನ ಸಮಸ್ಯೆಯಿಂದ ಕುಡಿಯಲು ನೀರು ಸಿಗುತ್ತಿಲ್ಲ. ಇದರಿಂದ ಕಲುಷಿತ ನೀರು ಕುಡಿದ ಕಾರಣ ಕುರಿಗಳು ಮೃತಪಟ್ಟಿವೆ’ ಎಂದು ಮುಖಂಡ ಬಾಲರಾಜ್ ಕೊರವಿಹಾಳ್ ಹೇಳಿದರು.