ದೇವನಹಳ್ಳಿ: ಇತ್ತೀಚೆಗೆ ಸುರಿದ ಬಿರುಗಾಳಿ ಸಹಿತ ಅಲಿಕಲ್ಲು ಮಳೆಗೆ ಅಪಾರ ನಷ್ಟವಾಗಿದ್ದು ಸರ್ಕಾರ ರೈತರಿಗೆ ಸಕಾಲದಲ್ಲಿ ಪರಿಹಾರ ನೀಡಬೇಕೆಂದು ಜೆಡಿಎಸ್ ಮುಖಂಡ ನಿಸರ್ಗ ಎಲ್.ಎನ್. ನಾರಾಯಣಸ್ವಾಮಿ ಒತ್ತಾಯಿಸಿದರು.
ತಾಲ್ಲೂಕಿನ ಅರುವನಹಳ್ಳಿ ಗ್ರಾಮದ ಸುತ್ತಮತ್ತ ಬೆಳೆ ನಷ್ಟವಾಗಿರುವ ಪ್ರದೇಶಗಳಿಗೆ ಮಂಗಳವಾರ ತೆರಳಿ ರೈತರಿಗೆ ಸಹಾಯಧನ ವಿತರಿಸಿ ಮಾತನಾಡಿದ ಅವರು, ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ ಬರುವ ತರಕಾರಿ ಮತ್ತು ಪುಷ್ಪ ಬೆಳೆಗಳಿಗೆ ರೈತರು ಲಕ್ಷಾಂತರ ರೂಪಾಯಿ ಬ್ಯಾಂಕ್ ಸಾಲ ಮತ್ತು ಇತರೆ ಖಾಸಗಿ ಸಾಲ ಮಾಡಿ ಪಾಲಿಹೌಸ್ ಕೊಳವೆ ಬಾವಿ ಕೊರೆಯಿಸಿದ್ದಾರೆ.
ತುಂತುರು ಹನಿ ನೀರಾವರಿ ಅಳವಡಿಸಿಕೊಂಡು ಬೆಳೆಗೆ ಮುಂದಾಗಿದ್ದಾರೆ. ಸರ್ಕಾರ ಎಕರೆಗೆ ಐದಾರು ಸಾವಿರ ಪರಿಹಾರ ನೀಡಿದರೆ ಪ್ರಯೋಜನವಿಲ್ಲ ಎಂದು ಅವರು ಹೇಳಿದರು.
ತಾಲ್ಲೂಕು ಕೃಷಿಕ ಸಮಾಜದ ನಿರ್ದೇಶಕ ಅನಂದ್, ಎಪಿಎಂಸಿ ಮಾಜಿ ನಿರ್ದೇಶಕ ಆರ್.ಕೆ.ನಂಜೇಗೌಡ, ಗ್ರಾಮ ಪಂಚಾಯಿತಿ ಸದಸ್ಯರಾದ ಚಂದ್ರ ಶೇಖರ್, ಅನುಪಲ್ಲವಿ, ನಾರಾಯಣಸ್ವಾಮಿ, ಅನಿಲ್ ಕುಮಾರ್, ರಂಗನಾಥ್, ರಘು, ಮಂಜುನಾಥ್, ದಾಸರಹಳ್ಳಿ ಮೂರ್ತಿ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಬೇಕರಿ ಮಂಜುನಾಥ್ ಉಪಸ್ಥಿತರಿದ್ದರು. ಸಂತ್ರಸ್ತ ಮುದ್ದುನಾಗಣ್ಣ ಮತ್ತು ಲಕ್ಷ್ಮಮ್ಮರಿಗೆ ಸಹಾಯಧನ ವಿತರಿಸಲಾಯಿತು.