ದೇವನಹಳ್ಳಿ: ‘ಶಾಸಕರ ಅನುದಾನದಲ್ಲಿ ಉಳಿದಿರುವ ಅಂಗವಿಕಲರಿಗೆ ಶೇ 3 ರಷ್ಟು ಉಳಿದಿರುವ ಮೀಸಲು ಅನುದಾನಕ್ಕೆ ಶೀಘ್ರ ಪಟ್ಟಿ ಮಾಡಿ’ ಎಂದು ಶಾಸಕ ಪಿಳ್ಳಮುನಿಶಾಮಪ್ಪ ಅಧಿಕಾರಿಗಳಿಗೆ ತಾಕೀತು ಮಾಡಿದರು.
ದೇವನಹಳ್ಳಿ ಪಟ್ಟಣದ ಜಿಲ್ಲಾ ವಿಕಲ ಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಕಚೇರಿಯಲ್ಲಿ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರ ಸಹಯೋಗದಲ್ಲಿ ಬುಧವಾರ ನಡೆದ ಅಂಗವಿಕಲರಿಗೆ ಸಾಧನ ಸಲಕರಣೆ ಮತ್ತು ತ್ರಿಚಕ್ರ ಮೋಟಾರು ವಾಹನ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅಂಗವಿಕಲರು ಅಸಹಾಯಕರಲ್ಲ, ಅಗಾಧ ಸಾಮರ್ಥ್ಯವುಳ್ಳ ಪ್ರತಿಭೆಗಳು ಎಂದು ಅಭಿಪ್ರಾಯಪಟ್ಟರು.
ಅನೇಕ ಅಂಗವಿಕಲರಿಗೆ ಸೌಲಭ್ಯದ ಬಗ್ಗೆ ಮಾಹಿತಿ ಇರುವುದಿಲ್ಲ, ಜನಪ್ರತಿನಿಧಿಗಳು ಇಲಾಖೆ ಅಧಿಕಾರಿಗಳು ಒಂದೆಡೆ ಮುಖಾಮುಖಿ ಚರ್ಚೆ ನಡೆಸಿದರೆ ಸಮಸ್ಯೆ ಬಗೆಹರಿಸಲು ಸಾಧ್ಯ ಪರಿಹಾರವು ತಕ್ಷಣ ಸಿಗಲಿದೆ ಎಂದರು .
ಸಮುದಾಯ ಆರೋಗ್ಯ ಕೇಂದ್ರ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ, ಕೆಲವು ಕಡೆ ಅಂಗವಿಕಲರನ್ನು ಪ್ರತ್ಯೇಕ ಕೊಠಡಿ ವ್ಯವಸ್ಥೆಯಡಿ ಇರಿಸಲಾಗುತ್ತದೆ ಸರಿಸಮಾನತೆಯಿಂದ ಕಂಡು ಸಹಜೀವನದಲ್ಲಿ ಭಾಗಿ ಮಾಡಿಕೊಂಡಾಗ ಭಾವನಾತ್ಮಕ ಸಂಬಂಧದ ಬೆಸುಗೆ ಗಟ್ಟಿಯಾಗುತ್ತದೆ ಎಂದು ಅವರು ಹೇಳಿದರು.
40 ಅಂಗವಿಕಲರಿಗೆ ಸಾಧನ ಸಲಕರಣೆ, ನಾಲ್ಕು ಅರ್ಹರಿಗೆ ತ್ರಿಚಕ್ರ ಮೋಟಾರ್ ವಾಹನ ವಿತರಿಸಲಾಯಿತು. ಜಿಲ್ಲಾ ವಿಕಲ ಚೇತನ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ಉಪನಿರ್ದೆಶಕಿ ಸುಮಂಗಳ ಉಪಸ್ಥಿತರಿದ್ದರು .