ರಾಮನಗರ: ರೋಗಿಗಳ ಜೊತೆ ಉಳಿದುಕೊಳ್ಳುವವರ ಅನುಕೂಲಕ್ಕಾಗಿ ಇಲ್ಲಿನ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ 25 ಹಾಸಿಗೆ ಸಾಮರ್ಥ್ಯದ ವಿಶ್ರಾಂತಿಗೃಹ (ಡಾರ್ಮೆಟರಿ) ನಿರ್ಮಾಣವಾಗಲಿದೆ. ಈ ಕುರಿತ ಒಂಡಂಬಡಿಕೆಗೆ ಬುಧವಾರ ಜಿಲ್ಲಾಧಿಕಾರಿ ಬಿ.ಆರ್. ಮಮತಾ ಸಮ್ಮುಖದಲ್ಲಿ ಸಹಿ ಮಾಡಲಾಯಿತು.
ಇಸ್ರೋ ಅಂಗಸಂಸ್ಥೆಯಾದ ಅಂತ್ರಿಕ್ಷ್ ಕಾರ್ಪೊರೇಶನ್ನ ನಿರ್ದೇಶಕ (ಸಿಎಸ್ಆರ್) ಬಿ.ಕೆ. ರಂಗನಾಥ್, ಸುಲಭ್ ಅಂತರರಾಷ್ಟ್ರೀಯ ಸಾಮಾಜಿಕ ಸೇವಾ ಸಂಸ್ಥೆಯ ಉಪಾಧ್ಯಕ್ಷ ವಿಶ್ವನಾಥ್ ಹಾಗೂ ಜಿಲ್ಲಾ ಶಸ್ತ್ರಚಿಕಿತ್ಸಕ ಎಂ.ಕೆ. ಮುನಿರಾಜು ಒಡಂಬಡಿಕೆಗೆ ಸಹಿ ಹಾಕಿದರು.
ಏನಿದು ಯೋಜನೆ: ಆಸ್ಪತ್ರೆ ಸೇರುವ ರೋಗಿಗಳ ಜೊತೆ ಅವರ ಸಂಬಂಧಿಕರು, ಸ್ನೇಹಿತರು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತಾರೆ. ಇದರಿಂದ ಆಸ್ಪತ್ರೆಯಲ್ಲಿ ಸೋಂಕು ಹರಡುವ ಸಾಧ್ಯತೆ ಹೆಚ್ಚು. ಗಜಿಬಿಜಿಯ ವಾತಾವರಣದಿಂದ ರೋಗಿಗಳಿಗೂ ತೊಂದರೆ. ಇದನ್ನು ತಪ್ಪಿಸಿ ಜನರಿಗೆ ಸಮೀಪದಲ್ಲಿಯೇ ತಾತ್ಕಾಲಿಕ ವಸತಿ, ಶೌಚ ಮೊದಲಾದ ಸೇವೆಯನ್ನು ಒದಗಿಸುವ ಸಲುವಾಗಿ ಈ ವಿಶ್ರಾಂತಿಗೃಹ ನಿರ್ಮಾಣವಾಗುತ್ತಿದೆ.
ಆಂತ್ರಿಕ್ಷ್ ಸಂಸ್ಥೆಯು ಇದಕ್ಕೆ ಬೇಕಾದ ಹಣಕಾಸು ನೆರವನ್ನು ತನ್ನ ಸಾಮಾಜಿಕ ಹೊಣೆಗಾರಿಕೆ ನಿಧಿ (ಸಿಎಸ್ಆರ್) ಅಡಿ ಭರಿಸಲಿದೆ. ಇದಕ್ಕಾಗಿ ₹60 ಲಕ್ಷಕ್ಕೂ ಹೆಚ್ಚು ಹಣ ವ್ಯಯವಾಗಲಿದೆ ಎಂದು ಅಂದಾಜಿಸಲಾಗಿದೆ ‘ಇಲ್ಲಿ ಜನರಿಗೆ ತಂಗುವ ವ್ಯವಸ್ಥೆ, ಸ್ನಾನ, ಶೌಚ, ಕುಡಿಯುವ ನೀರು ಮೊದಲಾದ ಸೌಲಭ್ಯಗಳನ್ನು ಕಲ್ಪಿಸಲಾಗುವುದು, ಸಿಎಸ್ಆರ್ ಅಡಿ ಯಾವುದೇ ಸಂಸ್ಥೆಗಳು ಕ್ಯಾಂಟೀನ್ ಆರಂಭಕ್ಕೆ ಮುಂದಾದಲ್ಲಿ ಅದಕ್ಕೂ ಅವಕಾಶ ಮಾಡಿಕೊಡಲಾಗುವುದು’ ಎಂದು ಜಿಲ್ಲಾಧಿಕಾರಿ ಬಿ.ಆರ್. ಮಮತಾ ತಿಳಿಸಿದರು.
‘ಮುಂದಿನ ವಾರ ಈ ಕಾಮಗಾರಿಗೆ ಸಚಿವರಾದ ಡಿ.ಕೆ. ಶಿವಕುಮಾರ್ ಹಾಗೂ ರಮೇಶ್ಕುಮಾರ್ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಮುಂದೆ ಜಿಲ್ಲೆಯ ಮೂರು ತಾಲ್ಲೂಕು ಆಸ್ಪತ್ರೆಗಳಲ್ಲಿಯೂ ಇಂತಹ ಕೇಂದ್ರಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ’ ಎಂದರು.