ಸಿಂದಗಿ: ಡೊನೇಶನ್ ಹಾವಳಿ ಕಡಿವಾಣಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಕಾರ್ಯ ಕರ್ತರು ಬುಧವಾರ ನಗರದ ಮಿನಿವಿಧಾನಸೌಧ ಎದುರು ಪ್ರತಿಭಟನೆ ನಡೆಸಿದರು. ಪ್ರತಿಭಟನಕಾರರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ನಂತರ ನಡೆದ ಪ್ರತಿಭಟನಾ ಸಭೆಯಲ್ಲಿ ಕರವೇ ವಿದ್ಯಾರ್ಥಿ ಘಟಕದ ತಾಲ್ಲೂಕು ಅಧ್ಯಕ್ಷ ಚೇತನ ರಾಂಪೂರ, ಪ್ರಧಾನ ಕಾರ್ಯದರ್ಶಿ ಮುತ್ತು ಹಿಪ್ಪರಗಿ ಮಾತನಾಡಿ,‘ನಗರದಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿ ನಿಂತ ಶಿಕ್ಷಣ ಸಂಸ್ಥೆಗಳು ನಿಯಮಗಳನ್ನು ಗಾಳಿಗೆ ತೂರಿ ವಿದ್ಯಾರ್ಥಿಗಳು–ಪೋಷಕರಿಂದ ಶಿಕ್ಷಣ ಶುಲ್ಕ ಹೆಸರಿನಲ್ಲಿ ಹಗಲು ದರೋಡೆ ಮಾಡುತ್ತಲಿವೆ’ ಎಂದು ಆರೋಪಿಸಿದರು.
ಕಳೆದ ವರ್ಷ ಶಿಕ್ಷಣ ಇಲಾಖೆ ಮತ್ತು ತಾಲ್ಲೂಕು ಆಡಳಿತ ಡೊನೇಶನ್ ಹಾವಳಿ ತಡೆಗಟ್ಟಲು ಸರ್ಕಾರದ ನಿಯಮದಂತೆ ಶುಲ್ಕ ಪಡೆಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿತ್ತು. ಆದರೂ ಶಿಕ್ಷಣ ಸಂಸ್ಥೆಗಳ ಪ್ರಮುಖರು ಡೊನೇಶನ್ ಪಡದೇ ಪಡೆಯುತ್ತೇವೆ ಎಂದು ರಾಜಾರೋಷವಾಗಿ ತಾಲ್ಲೂಕು ಆಡಳಿತಕ್ಕೆ ಸವಾಲೆಸೆದರೂ ಯಾವುದೇ ಕ್ರಮ ಜರುಗಿಸದೇ ಇದ್ದುದು ದುರದೃಷ್ಟಕರ ಎಂದರು.
ತಾಲ್ಲೂಕು ಆಡಳಿತ ಕೂಡಲೇ ಶಿಕ್ಷಣ ಇಲಾಖೆ ಹಾಗೂ ಎಲ್ಲಾ ಶಾಲಾ–ಕಾಲೇಜುಗಳಿಗೆ ನೋಟೀಸು ನೀಡಿ ಸರ್ಕಾರ ನಿಗದಿಪಡಿಸಿದ ಶಾಲಾ ಶುಲ್ಕವನ್ನು ಶಾಲಾ ಆವರಣದಲ್ಲಿನ ಬೋರ್ಡುಗಳ ಮೇಲೆ ಪ್ರಕಟಿಸಬೇಕು. ಈ ಬಗ್ಗೆ ನಿರ್ಲಕ್ಷ್ಯ ತಾಳಿದರೆ ರಕ್ಷಣಾ ವೇದಿಕೆ ವಿದ್ಯಾರ್ಥಿ ಘಟಕದ ಕಾರ್ಯ ಕರ್ತರು ಆಯಾ ಶಾಲಾ–ಕಾಲೇಜುಗಳ ವಿರುದ್ಧ ಶಾಲೆಯ ಎದುರು ಪ್ರತಿಭಟನೆ ನಡೆಲಾಗುವುದು ಎಂದು ಎಚ್ಚರಿಕೆ ನೀಡಿದರು.
ತಹಶೀಲ್ದಾರ ಗ್ರೇಡ್–2 ಎಂ.ಎಸ್. ಅರಕೇರಿ ಪ್ರತಿಭಟನಕಾರ ರಿಂದ ಮನವಿ ಪತ್ರ ಸ್ವೀಕರಿಸಿದರು. ಪ್ರಶಾಂತ ಕದ್ದರಕಿ, ರಾಕೇಶ ಬಾಗೇವಾಡಿ, ಆನಂದ ಡೋಣೂರ, ಅರ್ಜುನ ಪವಾರ, ರಮೇಶ ಸರಸಂಬಿ, ವಿಶ್ವನಾಥ ಅಸ್ಕಿ, ಸಂತೋಷ ಶಂಬೇವಾಡ, ಸುನೀಲ ತಳವಾರ, ಕೃಷ್ಣ ಯಂಟಮಾನ, ಸುನೀಲ ಬಿರಾದಾರ ನೇತೃತ್ವ ವಹಿಸಿದ್ದರು.