ಹಾವೇರಿ: ‘ಊರಾಗ ಏನೇ ಕೆಲಸ ನಡೆದರೂ, ‘ನಾನೇ ಮಾಡಿದ್ದು’ ಎಂದು ಊರಿನ ಮುಖಂಡರೊಬ್ಬರು ಹೇಳುತ್ತಿ ದ್ದರು. ಒಮ್ಮೆ ಯಾರೋ ಒಬ್ಬರು ಬಂದು, ‘ಕೋಣ ಗಬ್ಬಾಗಿದೆ’ ಎಂದು ಹೇಳಿದ್ರು. ಆಗಲೂ, ‘ನಾನೇ ಮಾಡಿದ್ದು’ ಎಂದು ಬಿಟ್ಟರು. ಹಾಗೆಯೇ, ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದರೂ, ‘ನಾನೇ ಮಾಡಿದ್ದು’ ಎಂದು ಸಿದ್ದರಾಮಯ್ಯ ಹೇಳ್ತಾರೆ’ ಎಂದು ಸಂಸದ ಪ್ರಹ್ಲಾದ್ ಜೋಶಿ ಲೇವಡಿ ಮಾಡಿದರು.
ನಗರದಲ್ಲಿ ಬುಧವಾರ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು. ‘ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಬಳಿಕ, ‘ಬಾಲವೇ ನಾಯಿಯನ್ನು ಅಲ್ಲಾಡಿಸುವ ಸ್ಥಿತಿ’ಗೆ ಕಾಂಗ್ರೆಸ್ ಬಂದಿದೆ’ ಎಂದರು.
‘ರಮ್ಯಾ ಅವರಿಗೆ ಯಾವುದಾದರು ಒಂದು ನಿಗಮ– ಮಂಡಳಿ ಕೊಡಿ ಎಂದು ರಾಹುಲ್ ಗಾಂಧಿ ಹೇಳಿದರೆ, ಆಕೆಯ ಕೈಗೆ ಬಲ್ಬ್ (ಹೊಸಬೆಳಕು) ನೀಡಿ ಊರು ಸುತ್ತಿಸುತ್ತಿದ್ದಾರೆ’ ಎಂದು ಲೇವಡಿ ಮಾಡಿದ ಅವರು, ‘ರಾಜ್ಯದಲ್ಲಿ ವಿದ್ಯುತ್ ಕೊರತೆಯಿಂದ ಜನಸಂಖ್ಯೆ ಹೆಚ್ಚಿದೆ’ ಎಂದರು.
‘ಶ್ರೀರಾಮಚಂದ್ರ ಹುಟ್ಟಬೇಕಾದರೆ, ದಶರಥ ತಪಸ್ಸು ಮಾಡಿದ್ದ. ಆ ತಪಸ್ಸಿಗೆ ಸೂರ್ಯದೇವ ಪಾಯಸ ಕೊಟ್ಟ. ಪಾಯಸ ಕುಡಿದು ದಶರಥ ಸುಮ್ಮನೆ ಮಕ್ಕೊಂಡಿದ್ರೆ, ಇಲ್ಲ ಸುಮ್ಮನೆ ಅಡ್ಡಾಡ್ ಕೊಂಡಿದ್ರೆ ಮಕ್ಕಳಾಗುತ್ತಿರಲಿಲ್ಲ. ಅವನು ಏನು ಚಟುವಟಿಕೆ ಮಾಡಬೇಕಿತ್ತೋ? ಅದನ್ನು ಮಾಡಿದ್ದ’ ಎಂದು ಪಕ್ಷ ಸಂಘಟನೆ ಕುರಿತು ಕಾರ್ಯಕರ್ತರಿಗೆ ವಿವರಿಸಿದರು.