ಅಂಕೋಲಾ: ಮೇ ತಿಂಗಳಲ್ಲಿ ಸಾಮಾನ್ಯವಾಗಿ ತಾಲ್ಲೂಕಿನ ವಿವಿಧೆಡೆ ತೆರೆದ ಬಾವಿಯನ್ನು ನಿರ್ಮಿಸಲಾಗುತ್ತಿದೆ.
ನದಿ ಹಾಗೂ ಸಮೀಪವಿರುವ ಸ್ಥಳಗಳಲ್ಲಿ ಉಸುಕು ಬರುವುದರಿಂದ ಕಡಿಮೆ ದರದಲ್ಲಿ ತೆರೆದ ಬಾವಿ ನಿರ್ಮಾಣ ಮಾಡಲು ಸಾಧ್ಯವಾದರೆ ಇನ್ನು ಮೇಲ್ಭಾಗದಲ್ಲಿ ಕಲ್ಲು ಬಂಡೆ ಹಾಗೂ ವಿವಿಧ ಕಾರಣಗಳಿಂದ ಭೂಮಿ ಗಟ್ಟಿಯಾಗಿದ್ದರೆ ಅಲ್ಲಿ ಲಕ್ಷಾಂತರ ರೂಪಾಯಿ ವೆಚ್ಚ ಮಾಡಿ ಬಾವಿ ನಿರ್ಮಿಸಬೇಕಾಗಿದೆ. ಆದರೂ ಕೂಡ ಬೇಸಿಗೆಯಲ್ಲಿ ನೀರಿನ ಅಭಾವ ಕಂಡುಬರುತ್ತಿದೆ.
ಆಳ ಬಾವಿ ನಿರ್ಮಾಣ ಸ್ಥಳೀಯರಿಂದ ಸಾಧ್ಯವಾಗದಿದ್ದರಿಂದಾಗಿ ಕೇರಳ, ತಮಿಳುನಾಡು ರಾಜ್ಯಗಳಿಂದ ಕೂಲಿಯಾಳುಗಳಿಂದ ಬಾವಿ ನಿರ್ಮಿಸಲಾಗುತ್ತಿದೆ. ತಾಲ್ಲೂಕಿನಲ್ಲಿ ಕೆಲವು ಏಜೆಂಟರಿದ್ದು, ಅವರು ಹೊರರಾಜ್ಯದ ಕೂಲಿಗಳನ್ನು ಕರೆಯಿಸಿ ಆಳ ಬಾವಿಯನ್ನು ನಿರ್ಮಿಸುತ್ತಾರೆ. ಎಷ್ಟೇ ಕಷ್ಟದ ಬಾವಿಯಿದ್ದರೂ ಸಾಹಸಿಗರಾದ ಕಾರ್ಮಿಕರು ಬಾವಿಯನ್ನು ನಿರ್ಮಿಸಲು ನಿಪುಣರಾಗಿದ್ದಾರೆ.
ಭಾರೀ ಆಳಕ್ಕೆ ಹೋದ ಸಂದರ್ಭ ದಲ್ಲಿ ಒಬ್ಬ ಕೂಲಿಯಾಳು ಮಣ್ಣನ್ನು ತೆಗೆದು ಬುಟ್ಟಿಗೆ ಹಾಕಿದರೆ ಅದನ್ನು ಮೇಲೆತ್ತಲು ಇಬ್ಬರು ಕಾರ್ಮಿಕರು ಹಗ್ಗಕ್ಕೆ ಕಟ್ಟಿದ ಬಳ್ಳಿಯನ್ನು ತಮ್ಮ ತೋಳ್ಬಲದ ಮೂಲಕ ಮೇಲೆತ್ತುತ್ತಾರೆ. ಅಲ್ಲಿಯೇ ನಿಂತುಕೊಳ್ಳುವ ಇನ್ನೊಬ್ಬ ಕಾರ್ಮಿಕ ಆ ಬುಟ್ಟಿಯನ್ನು ಹೊರ ತೆಗೆಯುತ್ತಾನೆ. ಈ ಕಾರ್ಮಿಕರು ದಿನಕ್ಕೆ ₹ 700 ರಿಂದ 1000 ವರೆಗೂ ಸಂಬಳ ಪಡೆಯುತ್ತಾರೆ.