‘ಆ್ಯಕ್ಷನ್, ಅದರಲ್ಲೂ ಪೊಲೀಸ್ ಪಾತ್ರ ನನಗೆ ಹೊಂದುವುದಿಲ್ಲ. ಆದರೂ, ತುಂಬಾ ಯೋಚನೆ ಮಾಡಿ ಈ ಪಾತ್ರವನ್ನು ಒಪ್ಪಿಕೊಂಡೆ. ಅದಕ್ಕೆ ಕಥೆ ಮತ್ತು ಪಾತ್ರಕ್ಕಿರುವ ತೂಕ ಕಾರಣ’ – ನಟಿ ನೀತು ಅವರ ಮಾತುಗಳಲ್ಲಿ ಆತ್ಮಿವಿಶ್ವಾಸ ಎದ್ದು ಕಾಣುತ್ತಿತ್ತು.
(ನೀತು)
‘ಮೊಂಬತ್ತಿ’ ಚಿತ್ರದಲ್ಲಿ ಸಹಾಯಕ ಪೊಲೀಸ್ ಕಮಿಷನರ್ ಆಗಿ ಕಾಣಿಸಿಕೊಂಡಿರುವ ಅವರು, ಆ್ಯಕ್ಷನ್ ದೃಶ್ಯಗಳಿಗೂ ಸೈ ಎಂದಿದ್ದಾರೆ. ‘ಎಸಿಪಿ ಶಿವಾನಿಯಾಗಿ ನನ್ನನ್ನು ತೋರಿಸಿರುವ ನಿರ್ದೇಶಕರು, ಇಂತಹ ಪಾತ್ರವನ್ನು ನಾನು ಮಾಡಬಲ್ಲೆ ಎಂಬ ಆತ್ಮವಿಶ್ವಾಸ ತುಂಬಿದ್ದಾರೆ’ ಎಂದು ನಿರ್ದೇಶಕ ಶ್ರೀನಿವಾಸ್ ಕೌಶಿಕ್ ಅವರಿಗೆ ಕೃತಜ್ಞತೆ ಸಲ್ಲಿಸಿದ ಅವರು, ‘ಚಿತ್ರ ಬಿಡುಗಡೆಗೆ ಕಾತರದಿಂದ ಕಾಯತ್ತಿದ್ದೇನೆ’ ಎಂದು ಮಾತು ಮುಗಿಸಿದರು. ಅಂದಹಾಗೆ, ‘ಮೊಂಬತ್ತಿ’ ಚಿತ್ರಕ್ಕೀಗ ಹಾಡುಗಳ ಧ್ವನಿಮುದ್ರಿಕೆ ಬಿಡುಗಡೆಯ ಸಂಭ್ರಮ.
(ರವಿಕುಮಾರ್)
‘ನಗರಕೇಂದ್ರಿತ ಕಥಾವಸ್ತು ಚಿತ್ರದ್ದಾಗಿದ್ದು – ಲವ್, ಕ್ರೈಂ, ಸಸ್ಪೆನ್ಸ್, ಹಾಗೂ ಥ್ರಿಲ್ಲರ್ ಎಲ್ಲವೂ ಇದೆ. ‘ಕ್ಯಾಂಡಲ್ ಇನ್ ದ ವಿಂಡ್’ ಎಂಬ ಶೀರ್ಷಿಕೆಯ ಅಡಿಬರಹ ಚಿತ್ರದ ನಾಯಕನ ಜೀವನವನ್ನು ಸಂಕೇತಿಸುತ್ತಿದೆ. ಇಡೀ ಚಿತ್ರವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆ’ ಎಂದರು ನಿರ್ದೇಶಕ ಶ್ರೀನಿವಾಸ್ ಕೌಶಿಕ್.
ರವಿಕುಮಾರ್ ಮತ್ತು ರಚನಾ ಸ್ಮಿತ್ ಚಿತ್ರದ ನಾಯಕ–ನಾಯಕಿ. ‘ಉದ್ಯಮಿ ಪಾತ್ರ ನನ್ನದು. ಚಿತ್ರದಲ್ಲಿ ನೀತು ಅವರೊಂದಿಗೆ ಹೊಡೆದಾಟದ ದೃಶ್ಯವಿದೆ. ‘ಬಿಗ್ ಬಾಸ್’ ಖ್ಯಾತಿಯ ಸಂಜನಾ ಜೊತೆ ನರ್ತಿಸಿದ್ದೇನೆ. ಇವೆರಡು ನನಗೆ ಒಂದು ರೀತಿಯಲ್ಲಿ ಸ್ಪೆಷಲ್’ ಎಂದರು ರವಿಕುಮಾರ್. ‘ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಆದರೆ, ಒಬ್ಬರೂ ನಾಯಕನಿಗೆ ಸಿಗುವುದಿಲ್ಲ’ ಎಂದು ನಗುತ್ತಾ ಮಾತಿಗೆ ವಿರಾಮ ಹಾಕಿದರು.
(ಶ್ರೀನಿವಾಸ್ ಕೌಶಿಕ್)
ಹಾಸ್ಯದ ಲೇಪ ಇರುವ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಯತಿರಾಜ್ ಕಾಣಿಸಿಕೊಂಡಿದ್ದರೆ, ಐಟಂ ಹಾಡಿಗೆ ಸಂಜನಾ ಸೊಂಟ ಬಳುಕಿಸಿದ್ದಾರೆ.
ಚಿತ್ರಕ್ಕೆ ಬಂಡವಾಳ ಹಾಕುವ ಜತೆಗೆ, ತಂದೆಯ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ ನಿರ್ಮಾಪಕ ಎಂ. ಪ್ರಭಾಕರ್. ಸತೀಶ್ ಬಾಬು ಸಂಗೀತ ನಿರ್ದೇಶನ ಚಿತ್ರಕ್ಕಿದ್ದು, ಲಹರಿ ಮ್ಯೂಸಿಕ್ ಆಡಿಯೊ ಸಿ.ಡಿ ಹೊರತಂದಿದೆ.
ಸಿ.ಡಿ ಬಿಡುಗಡೆ ಮಾಡಿದ ಲಹರಿ ವೇಲು, ‘ರಾಜ್ಯದಾದ್ಯಂತ ಮೊಂಬತ್ತಿ ಚನ್ನಾಗಿ ಬೆಳಗಿ, ನಿರ್ಮಾಪಕರ ಜೇಬು ತುಂಬಿಸಲಿ’ ಎಂದು ಹರಸಿದರು.
(ಯತಿರಾಜ್)
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.