‘ಕನ್ನಡದ ವೃದ್ಧಾಪ್ಯ! ಹೊಸ ಪೀಳಿಗೆ ಎಲ್ಲಿದೆ?’ ಎಂಬ ಡಾ.ಚಂದ್ರಶೇಖರ ದಾಮ್ಲೆಯವರ (ಪ್ರ.ವಾ., ಸಂಗತ, ಮೇ 24) ಪ್ರಶ್ನೆಯು, ‘ಏನೇ ಆದರೂ ಕನ್ನಡಕ್ಕೆ ಕುಂದಿಲ್ಲ ಎಂದು ಧೈರ್ಯ ತಾಳುವವರ ಗುಂಪಿಗೆ ನಾನು ಸೇರಿಲ್ಲ’ ಎಂದು ಹೇಳಿದ ಹಾ.ಮಾ. ನಾಯಕರ ಮಾತನ್ನು ಸಮರ್ಥಿಸುವಂತಿದೆ.
ಕಲಿಕಾ ಮಾಧ್ಯಮದ ಪ್ರಶ್ನೆ ನಮ್ಮಲ್ಲಿ ಆಗಾಗ ಚರ್ಚೆಗೆ ಬರುತ್ತಿದೆ. ಭಾಷೆಯನ್ನು ಕಲಿಯುವುದಕ್ಕೂ, ಭಾಷೆಯ ಮೂಲಕ ಕಲಿಯುವುದಕ್ಕೂ ಇರುವ ವ್ಯತ್ಯಾಸವನ್ನು ನಾವು ಅರಿತುಕೊಳ್ಳಬೇಕಾಗಿದೆ.
ತಾಯಿ ಮತ್ತು ತಾಯ್ನೆಲ ನಮ್ಮ ಜೀವನದ ಪರಮ ಮೌಲ್ಯಗಳೆಂದು ವೇದಿಕೆಗಳಲ್ಲಿ ಬೊಬ್ಬೆ ಹೊಡೆಯುವ ನಾವು, ನಮ್ಮ ಬದುಕಿನ ಭಾಷೆಯನ್ನು ವ್ಯಾಪಾರಿ ಮನೋಭಾವದಿಂದ ನೋಡುತ್ತಿದ್ದೇವೆ.
ಉದ್ಯೋಗ ಮತ್ತು ಧನಸಂಪಾದನೆಗಷ್ಟೇ ಶಿಕ್ಷಣ, ಇಂಗ್ಲಿಷ್ ಮಾಧ್ಯಮದಲ್ಲಿ ಕಲಿತವರಷ್ಟೇ ಇವೆರಡನ್ನೂ ಗಳಿಸುತ್ತಾರೆನ್ನುವ ಭ್ರಮೆ ನಮ್ಮಲ್ಲಿದೆ. ಇದೆಲ್ಲಾ ಭ್ರಾಂತಿ.
ಮಾತೃಭಾಷೆಯಲ್ಲಿ ಓದಿದವರೂ ಸಮಾಜದಲ್ಲಿ ಉನ್ನತ ಹಂತಕ್ಕೇರಿದ್ದಾರೆ ಎಂದು ಹೇಳಬೇಕಾದ ಶಿಕ್ಷಕರು, ಸರ್ಕಾರಿ ಅಧಿಕಾರಿಗಳು, ಸಾಹಿತಿಗಳು ಮತ್ತು ಬುದ್ಧಿಜೀವಿಗಳು ಕನ್ನಡ ಮಾಧ್ಯಮದಲ್ಲಿ ಅವಿಶ್ವಾಸ ತೋರಿರುವುದನ್ನು ಗಮನಿಸಿದಾಗ, ಬೇಲಿಯೇ ಎದ್ದು ಹೊಲ ಮೇಯ್ದಂತಾಗಿದೆ!
ರೇವಣ್ಣ ಎಂ.ಜಿ., ಕೆ.ಆರ್.ಪೇಟೆ