ಮುಂಬೈ: ವಿದೇಶಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ವೈದ್ಯಕೀಯ ಉಪಕರಣಗಳನ್ನು ಭಾರತದಲ್ಲೇ ತಯಾರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ನವೋದ್ಯಮಗಳಿಗೆ ಕರೆ ನೀಡಿದರು.
ಬಡವರಿಗೆ ಕೈಗೆಟುಕುವ ದರದಲ್ಲಿ ವೈದ್ಯಕೀಯ ಸೇವೆ ಲಭ್ಯವಾಗಬೇಕು ಎಂಬ ಸರ್ಕಾರದ ಉದ್ದೇಶ ಈಡೇರಬೇಕಾದರೆ ಇದು ಅಗತ್ಯ ಎಂದು ಅವರು ಒತ್ತಿ ಹೇಳಿದರು.
ಟಾಟಾ ಮೆಮೊರಿಯಲ್ ಸೆಂಟರ್ನ 75ನೇ ವರ್ಷಾಚರಣೆ ನಿಮಿತ್ತ ಮುಂಬೈನಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ದೆಹಲಿಯಿಂದ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ಮಾತನಾಡಿದರು.
‘ದೇಶದಲ್ಲಿ ಪ್ರತಿವರ್ಷ 10 ಲಕ್ಷಕ್ಕೂ ಹೆಚ್ಚು ಜನರಲ್ಲಿ ಕ್ಯಾನ್ಸರ್ ಸೋಂಕು ಪತ್ತೆಯಾಗುತ್ತಿದ್ದು, 6.5 ಲಕ್ಷ ಜನರು ಇದಕ್ಕೆ ಬಲಿಯಾಗುತ್ತಿದ್ದಾರೆ. 30 ವರ್ಷಗಳಲ್ಲಿ ಈ ಸಂಖ್ಯೆ ದ್ವಿಗುಣವಾಗುವ ಆತಂಕವನ್ನು ಕ್ಯಾನ್ಸರ್ ಕುರಿತ ಅಂತರರಾಷ್ಟ್ರೀಯ ಸಂಶೋಧನಾ ಸಂಸ್ಥೆ ವ್ಯಕ್ತಪಡಿಸಿದೆ’ ಎಂದು ಅವರು ಹೇಳಿದರು.
ಕ್ಯಾನ್ಸರ್ ಪೀಡಿತರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಕ್ಯಾನ್ಸರ್ ಕುರಿತ ಸಂಶೋಧನೆ ಹಾಗೂ ಚಿಕಿತ್ಸೆ ನೀಡುತ್ತಿರುವ ಸಂಸ್ಥೆ, ಆಸ್ಪತ್ರೆಗಳನ್ನು ಒಂದೇ ವೇದಿಕೆಗೆ ತರಲುವ ಅಗತ್ಯವಿದೆ ಎಂದರು.
ಹರಿಯಾಣದ ಝಾಜ್ಜರ್ನಲ್ಲಿ ರಾಷ್ಟ್ರೀಯ ಕ್ಯಾನ್ಸರ್ ಸಂಸ್ಥೆ ನಿರ್ಮಾಣವಾಗಲಿದೆ ಎಂದು ಮೋದಿ ಹೇಳಿದರು.