ಲಖನೌ: ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರನ್ನು ಭೇಟಿ ಮಾಡುವ ವೇಳೆ ಸೋಪಿನಿಂದ ಸ್ನಾನ ಮಾಡಿ, ಸುಗಂಧದ್ರವ್ಯ ಹಾಕಿಕೊಂಡು ಬರುವಂತೆ ದಲಿತ ಸಮುದಾಯಕ್ಕೆ ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಅಧಿಕಾರಿಗಳು ಸೂಚಿಸಿದ್ದರು ಎಂದು ವರದಿಯಾಗಿದೆ.
ಯೋಗಿ ಅವರು ಗುರುವಾರ ಕುಶಿ ನಗರದ ಮೇನ್ಪುರ ಕೊಟ್ ಗ್ರಾಮಕ್ಕೆ ಭೇಟಿ ನೀಡಿದ್ದರು.
ಮುಷರ್ ಸಮುದಾಯಕ್ಕೆ ಸೇರಿದ (ಅಸ್ಪೃಶ್ಯ ಸಮುದಾಯಕ್ಕೆ ಸೇರಿದ ಇವರು, ಇಲಿ ಹಿಡಿಯುವ ಕಸುಬುದಾರರು) ಸದಸ್ಯರಿಗೆ ಸುಗಂಧ ದ್ರವ್ಯ ಲೇಪಿತ ಸೋಪ್, ಸುಗಂಧದ್ರವ್ಯ, ಶಾಂಪೂ ನೀಡಿದ್ದ ಅಧಿಕಾರಿಗಳು ಸ್ನಾನ ಮಾಡಿ ಶುಭ್ರವಾಗಿ ಬರುವಂತೆ ತಿಳಿಸಿದ್ದರು ಎಂದು ಗ್ರಾಮಸ್ಥರೊಬ್ಬರು ತಿಳಿಸಿದ್ದಾರೆ.
‘ಸಿ.ಎಂ ಭೇಟಿ ಕಾರಣ ಗ್ರಾಮದಲ್ಲಿ ಅಲ್ಪ ಸಮಯದಲ್ಲೇ ಶೌಚಾಲಯ ನಿರ್ಮಾಣವಾದವು. ರಸ್ತೆ, ಚರಂಡಿಗಳು ಸ್ವಚ್ಛಗೊಂಡವು. ಮನೆಗಳನ್ನು ಸ್ವಚ್ಛವಾಗಿಟ್ಟುಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದರು’ ಎಂದು ಸ್ಥಳೀಯರೊಬ್ಬರು ಹೇಳಿದ್ದಾರೆ.