ಬೆಂಗಳೂರು: ಟೆಂಡರ್ ಶ್ಯೂರ್ ರಸ್ತೆ ಯೋಜನೆ ಮಾದರಿಯಲ್ಲಿ ಸುಮಾರು ₹9 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸುತ್ತಿರುವ ಚರ್ಚ್ ಸ್ಟ್ರೀಟ್ ರಸ್ತೆ ಕಾಮಗಾರಿಯನ್ನು ಆಗಸ್ಟ್ ಒಳಗೆ ಪೂರ್ಣಗೊಳಿಸಲು ಬೆಂಗಳೂರು ಅಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಗುತ್ತಿಗೆ ದಾರರು ಮತ್ತು ಬಿಬಿಎಂಪಿ ಅಧಿಕಾರಿ ಗಳಿಗೆ ತಾಕೀತು ಮಾಡಿದರು.
ಮಳೆನೀರು ಚರಂಡಿ, ಕುಡಿಯುವ ನೀರಿನ ಕೊಳವೆ ಮಾರ್ಗ, ಆಪ್ಟಿಕಲ್ ಫೈಬರ್ ಕೇಬಲ್ (ಒಎಫ್ಸಿ), ಬೆಸ್ಕಾಂ ವಿದ್ಯುತ್ ಸಂಪರ್ಕ ಜಾಲ, ಬೀದಿ ದೀಪ, ಸಿ.ಸಿ ಟಿ.ವಿ ಕ್ಯಾಮೆರಾ ಕೇಬಲ್ ಅಳ ವಡಿಸಲು ನಿರ್ಮಿಸುತ್ತಿರುವ ಯುಟಿಲಿಟಿ ಡಕ್ಟ್ ಕಾಮಗಾರಿಯನ್ನು ಸಚಿವರು, ಮೇಯರ್ ಜಿ. ಪದ್ಮಾವತಿ ಮತ್ತು ಅಧಿ ಕಾರಿಗಳ ಜತೆಗೆ ಗುರುವಾರ ಪರಿಶೀಲನೆ ನಡೆಸಿದರು.
‘ಈ ರಸ್ತೆ ಸದಾ ಜನದಟ್ಟಣೆ ಮತ್ತು ವಾಣಿಜ್ಯ ಚಟುವಟಿಕೆಯಿಂದ ಕೂಡಿದೆ. ಕಾಮಗಾರಿ ವಿಳಂಬವಾದರೆ ಸಹಿಸ ಲಾಗದು. ದಿನದ 24 ತಾಸು 3 ಪಾಳಿ ಯಲ್ಲಿ ಕೆಲಸ ಮಾಡಿಸಬೇಕು’ ಎಂದು ಪಾಲಿಕೆ ಆಯುಕ್ತ ಎನ್. ಮಂಜುನಾಥ್ ಪ್ರಸಾದ್ ಸೂಚನೆ ನೀಡಿದರು.
‘ಚರ್ಚ್ ಸ್ಟ್ರೀಟ್ನಲ್ಲಿರುವ ಬಹುತೇಕ ಕಟ್ಟಡಗಳ ಮಾಲೀಕರು ಶೌಚಾಲಯದ ಕೊಳಚೆಯನ್ನು ಮಳೆ ನೀರು ಚರಂಡಿಗೆ ಹರಿಬಿಟ್ಟಿದ್ದಾರೆ. ಯುಜಿಡಿ ಸಂಪರ್ಕ ಪಡೆದುಕೊಂಡಿಲ್ಲ. ರಸ್ತೆ ಅಭಿವೃದ್ಧಿ ಕಾಮ ಗಾರಿಗೆ ಸಹಕರಿಸುತ್ತಿಲ್ಲ’ ಎಂದು ಅಧಿ ಕಾರಿಗಳು ಸಚಿವರ ಗಮನಕ್ಕೆ ತಂದರು.
ಇದರಿಂದ ಕೆಂಡಾಮಂಡಲರಾದ ಸಚಿವರು, ಬೆಂಗಳೂರು ಜಲಮಂಡಳಿ ಎಂಜಿನಿಯರ್ ರಮಾನಂದ ಅವರನ್ನು ತರಾಟೆಗೆ ತೆಗೆದುಕೊಂಡರು. ‘ಇದು ವರೆಗೆ ಯಾಕೆ ನೋಟಿಸ್ ನೀಡಿಲ್ಲ’ ಎಂದು ಪ್ರಶ್ನಿಸಿದರು. ರಸ್ತೆ ಅಭಿವೃದ್ಧಿಪಡಿಸುತ್ತಿರುವುದು ಜನರ ಅನುಕೂಲಕ್ಕೆ ಎನ್ನುವುದನ್ನು ಕಟ್ಟಡ ಮಾಲೀಕರಿಗೂ ಅರ್ಥ ಮಾಡಿಸುವಂತೆ ಸೂಚಿಸಿದರು.
‘ಶೌಚಾಲಯದ ಕೊಳಚೆ ನೀರನ್ನು ಮಳೆ ನೀರು ಚರಂಡಿಗೆ ಬಿಟ್ಟಿರುವವರಿಗೆ ನೋಟಿಸ್ ನೀಡಬೇಕು. 10 ದಿನದ ಗಡುವಿನೊಳಗೆ ಸಂಪರ್ಕ ಪಡೆಯದಿದ್ದರೆ ಅಂತಹ ಕಟ್ಟಡಗಳ ವಾಣಿಜ್ಯ ಪರವಾನಗಿ ರದ್ದುಪಡಿಸಿ, ಬಾಗಿಲು ಮುಚ್ಚಿಸಬೇಕು’ ಎಂದು ಆಯುಕ್ತರಿಗೆ ಆದೇಶ ನೀಡಿದರು.
ಪ್ಯಾರಿಸ್ ಮಾದರಿಯಲ್ಲಿ ನಿರ್ಮಿಸ ಲಿರುವ ರಸ್ತೆಯ ವಿನ್ಯಾಸದ ಚಿತ್ರಗಳನ್ನು ವಾಸ್ತುಶಿಲ್ಪಿ ನರೇಶ್ ವಿ.ನರಸಿಂಹನ್ ಅವರು ಸಚಿವರಿಗೆ ತೋರಿಸಿದರು.
ಕಿನೊ ಥಿಯೇಟರ್ (ಸುಬೇದಾರ್ ಛತ್ರಂ ರಸ್ತೆ) ಸಮೀಪದ ರೈಲ್ವೆ ಕೆಳ ಸೇತುವೆ ಅಡಿ ಸಂಗ್ರಹವಾಗುತ್ತಿದ್ದ ಮಳೆ ನೀರನ್ನು ನೆಲದಡಿ ಪೈಪ್ಲೈನ್ ಮೂಲಕ ಮಂತ್ರಿ ಮಾಲ್ ಸಮೀಪದ ರಾಜ ಕಾಲುವೆಗೆ ಸೇರಿಸುವ ₹ 3 ಕೋಟಿ ವೆಚ್ಚದ ಕಾಮಗಾರಿಯನ್ನೂ ಸಚಿವರು ಪರಿಶೀಲಿಸಿದರು.
820 ಮೀಟರ್ ಉದ್ದದ ಪೈಪ್ಲೈನ್ ಕಾಮಗಾರಿಯಲ್ಲಿ 500 ಮೀಟರ್ ಕೆಲಸ ಪೂರ್ಣವಾಗಿದೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಿಂದ ಮಂತ್ರಿ ಮಾಲ್ ವರೆಗೆ ಕಾಮಗಾರಿ ಬಾಕಿ ಇದೆ.
ಎರಡು ದಿನಗಳ ಕಾಲ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಿ , ಕಾಮಗಾರಿ ನಡೆಸಲು ಅನುವು ಮಾಡಿಕೊಡುವಂತೆ ಸಂಚಾರ ವಿಭಾಗದ ಹೆಚ್ಚುವರಿ ಪೊಲೀಸ್ ಕಮಿಷನರ್ ಹಿತೇಂದ್ರ ಅವ ರಿಗೆ ಕೇಳಿಕೊಳ್ಳಲಾಗಿದೆ. ಅನುಮತಿ ಸಿಕ್ಕಿ ದರೆ ಇನ್ನು ಒಂದು ತಿಂಗಳಲ್ಲಿ ಈ ಕಾಮ ಗಾರಿ ಮುಗಿಯಲಿದೆ ಎಂದರು.
₹1 ಕೋಟಿ ವೆಚ್ಚದಲ್ಲಿ ಕೈಗೊಂಡಿ ರುವ ಕಲಾಸಿಪಾಳ್ಯ ಮಾರುಕಟ್ಟೆ ದುರಸ್ತಿ ಮತ್ತು ಪುನರುಜ್ಜೀವನ ಕಾಮಗಾರಿಗೂ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.
ಮಾಧ್ಯಮಗಳ ಮೇಲೆ ಸಚಿವ ಗರಂ!
‘ಗಾರ್ಡನ್ ಸಿಟಿ ಗಾರ್ಬೇಜ್ ಸಿಟಿ ಎನ್ನುವ ಕಳಂಕ ಹೊತ್ತಿತ್ತು. ಪತ್ರಿಕೆಗಳಲ್ಲಿ ಕಸದ ರಾಶಿಯ ಚಿತ್ರಗಳೇ ಕಾಣಿಸುತ್ತಿದ್ದವು. ಹಿಂದೆ ಅಭಿವೃದ್ಧಿ ಕೆಲಸ ನಡೆಯುತ್ತಿರಲಿಲ್ಲ. ಆಗ ಮಾಧ್ಯಮಗಳು ಸುಮ್ಮನಿದ್ದವು. ನಾವು ಸಾವಿರಾರು ಕೋಟಿ ವಿನಿಯೋಗಿಸಿ ನಗರ ಅಭಿವೃದ್ಧಿಪಡಿಸುತ್ತಿದ್ದೇವೆ. ಆದರೂ ನಮ್ಮನ್ನು ಪ್ರಶ್ನಿಸುತ್ತಿದ್ದೀರಿ’ ಎಂದು ಸಚಿವ ಜಾರ್ಜ್ ಮಾಧ್ಯಮ ಪ್ರತಿನಿಧಿಗಳ ವಿರುದ್ಧ ಹರಿಹಾಯ್ದರು.
‘ಟೆಂಡರ್ ಶ್ಯೂರ್ನಿಂದ ಇಡೀ ರಸ್ತೆಗಳು ಮತ್ತು ಪಾದಚಾರಿ ಮಾರ್ಗ ಹಾಳಾಗಿವೆ ಎನ್ನುವ ವರದಿ ಪ್ರಸಾರ ಮಾಡುತ್ತಿದ್ದೀರಿ. ನೃಪತುಂಗ ರಸ್ತೆಯಲ್ಲಿ ಲೋಕೋಪಯೋಗಿ ಇಲಾಖೆಯವರು ಕಾಂಪೌಂಡ್ ಕಟ್ಟುವಾಗ ಪಾದಚಾರಿ ಮಾರ್ಗಕ್ಕೆ ಸ್ವಲ್ಪ ಹಾನಿಯಾಗಿದೆ. ಗುತ್ತಿಗೆದಾರರು ಅದನ್ನು ಸರಿಪಡಿಸುತ್ತಾರೆ. ನಾವು ಎಷ್ಟೇ ಚೆನ್ನಾಗಿ ಕೆಲಸ ಮಾಡಿದರೂ ನೀವು ಒಪ್ಪುತ್ತಿಲ್ಲ. ನಕರಾತ್ಮಕವಾಗಿ ಬರೆಯುತ್ತಿದ್ದೀರಿ’ ಎಂದು ಹರಿಹಾಯ್ದರು. ‘ಟೆಂಡರ್ ಶ್ಯೂರ್ ರಸ್ತೆ ಅಥವಾ ಇನ್ಯಾವುದೇ ಕಾಮಗಾರಿಯನ್ನು ಇಂತಹವರಿಗೆ ಕೊಡಬೇಕೆಂದು ಶಿಫಾರಸು ಮಾಡಿಲ್ಲ. ಎಲ್ಲ ಕಾಮಗಾರಿಗಳು ಟೆಂಡರ್ ನಿಯಮ ಪ್ರಕಾರವೇ, ಪಾರದರ್ಶಕವಾಗಿ ನಡೆಯುತ್ತಿವೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.