ನವದೆಹಲಿ: ತಮ್ಮ ಪತ್ನಿ ಸುನಂದಾ ಪುಷ್ಕರ್ ಕುರಿತು ಅವಹೇಳನಕಾರಿ ವರದಿ ಪ್ರಸಾರ ಮಾಡಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಪತ್ರಕರ್ತ ಅರ್ನಬ್ ಗೋಸ್ವಾಮಿ ಮತ್ತು ರಿಪಬ್ಲಿಕ್ ಸುದ್ದಿ ವಾಹಿನಿ ವಿರುದ್ಧ ₹2 ಕೋಟಿ ಮೊತ್ತದ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.
ದೆಹಲಿ ಹೈಕೋರ್ಟ್ನಲ್ಲಿ ಈ ಬಗ್ಗೆ ಅರ್ಜಿ ಸಲ್ಲಿಸಿರುವ ತರೂರು ಅವರು, ತನಿಖೆ ಸಂಪೂರ್ಣವಾಗಿ ಮುಗಿಯುವವರೆಗೂ ತಮ್ಮ ಪತ್ನಿಯ ಸಾವಿಗೆ ಸಂಬಂಧಿಸಿದ ಯಾವುದೇ ವರದಿ ಪ್ರಸಾರ ಮಾಡದಂತೆ ಈ ಸುದ್ದಿ ವಾಹಿನಿಗೆ ನಿರ್ದೇಶನ ನೀಡುವಂತೆ ಕೋರಿದ್ದಾರೆ.
ಮೇ18ರಿಂದ 13ರವರೆಗೆ ಪ್ರಸಾರವಾದ ವರದಿಗಳಿಗೆ ಸಂಬಂಧಿಸಿದಂತೆ ತರೂರು ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ರೀತಿಯ ವರದಿಗಳು ತನಿಖೆ ಮೇಲೆ ಪರಿಣಾಮ ಬೀರಲಿವೆ. ಅಲ್ಲದೆ ವೈಯಕ್ತಿಕ ವರ್ಚಸ್ಸಿಗೂ ದಕ್ಕೆಯಾಗಲಿದೆ ಎಂದು ಅವರು ದೂರಿದ್ದಾರೆ.