ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗರುಡ’ ಸಿನಿಮಾ: ದೀಪಾ ಸನ್ನಿಧಿ ಜಾಗಕ್ಕೆ ಐಂದ್ರಿತಾರೇ

Last Updated 27 ಮೇ 2017, 12:14 IST
ಅಕ್ಷರ ಗಾತ್ರ

ಬೆಂಗಳೂರು: ಸಿದ್ಧಾರ್ಥ್‌ ಮಹೇಶ್‌ ನಾಯಕರಾಗಿ ನಟಿಸುತ್ತಿರುವ ‘ಗರುಡ’ ಸಿನಿಮಾ ಆರಂಭದಿಂದಲೇ ಸಾಕಷ್ಟು ಸುದ್ದಿ ಮಾಡುತ್ತಿದೆ. ಧನಕುಮಾರ್‌ ನಿರ್ದೇಶನದ ಈ ಸಿನಿಮಾಕ್ಕೆ ದೀಪಾ ಸನ್ನಿಧಿ ಮತ್ತು ಆಶಿಕಾ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಚಿತ್ರತಂಡವೇ ಹೇಳಿಕೊಂಡಿತ್ತು.

ಇತ್ತೀಚೆಗಷ್ಟೇ ಮುಹೂರ್ತ ನೆರವೇರಿಸಿರುವ ಚಿತ್ರತಂಡ ಇನ್ನೇನು ಚಿತ್ರೀಕರಣದಲ್ಲಿ ತೊಡಗಿಕೊಳ್ಳಬೇಕು ಎನ್ನುವಾಗ ಚಕ್ಕನೇ ‘ಗರುಡ’ ತನ್ನ ರೆಕ್ಕೆ ಬದಲಿಸಿಕೊಂಡಿದೆ! ಹೊಳಪುಗಣ್ಣ ಚೆಲುವೆ ದೀಪಾ ಸನ್ನಿಧಿ ಜಾಗದಲ್ಲಿ ದುಂಡುಮುಖದ ಬೆಡಗಿ ಐಂದ್ರಿತಾ ರೇ ಬಂದು ಕೂತಿದ್ದಾರೆ.

ಈ ಅಚಾನಕ್ ಬದಲಾವಣೆಗೆ ಏನು ಕಾರಣ ಎಂದು ಎಲ್ಲರೂ ಹುಬ್ಬೇರಿಸುತ್ತಿರುವಾಗಲೇ ಚಿತ್ರತಂಡ ‘ಡೇಟ್ಸ್‌ ಸಮಸ್ಯೆ’ ಎಂಬ ಸಿದ್ಧ ಉತ್ತರ ನೀಡಿ ರಕ್ಷಣಾತ್ಮಕ ಆಟದ ಮೊರೆಹೋಗಿದೆ.

‘ಕೆಲವು ಕಾರಣಗಳಿಂದ ಗರುಡ ಚಿತ್ರೀಕರಣ ಮುಂದೂಡಬೇಕಾಯ್ತು. ಹಾಗೆ ಮುಂದೂಡಿದ ಶೆಡ್ಯೂಲ್‌ನಲ್ಲಿ ದೀಪಾ ಅವರು ಬೇರೆ ಸಿನಿಮಾ ಚಿತ್ರೀಕರಣಕ್ಕೆ ಒಪ್ಪಿಕೊಂಡಿದ್ದರು. ಆದರೆ ನಾವೂ ಚಿತ್ರೀಕರಣ ಮುಂದೂಡುವ ಸ್ಥಿತಿಯಲ್ಲಿ ಇರಲಿಲ್ಲ. ಆದ್ದರಿಂದ ಅವರ ಪಾತ್ರವನ್ನು ಐಂದ್ರಿತಾ ಅವರಿಗೆ ನೀಡಿ ಚಿತ್ರೀಕರಣ ಮುಂದುವರಿಸಲು ನಿರ್ಧರಿಸಬೇಕಾಯ್ತು. ಈ ಬದಲಾವಣೆಗೆ ಇನ್ಯಾವುದೇ ಕಾರಣ ಇಲ್ಲ’ ಎಂದು ಸ್ಪಷ್ಟವಾಗಿ ಹೇಳುವ ನಾಯಕನಟ ಸಿದ್ಧಾರ್ಥ್‌, ‘ದೀಪಾ ಇನ್ಯಾವ ಸಿನಿಮಾದ ಚಿತ್ರೀಕರಣ ಒಪ್ಪಿಕೊಂಡಿದ್ದರು?’ ಎಂದು ಕೇಳಿದರೆ ‘ಗೊತ್ತಿಲ್ಲ’ ಎಂದು ಕತ್ತಾಡಿಸುತ್ತಾರೆ.

‘ಗರುಡ’ದಲ್ಲಿ ದೀಪಾ ಸನ್ನಿಧಿ ನಟಿಸಬೇಕಾಗಿದ್ದ ಪಾತ್ರವನ್ನು ನೀವು ನಿರ್ವಹಿಸಲಿದ್ದೀರಂತೆ ಎಂದು ಪ್ರಶ್ನಿಸಿದರೆ ಐಂದ್ರಿತಾ ಇನ್ನೊಂಚೂರು ಸುತ್ತಿ ಬಳಸಿ ಮಾತನಾಡುತ್ತಾರೆ.

‘ದೀಪಾ ಅವರಿಗೆ ಡೇಟ್ಸ್‌ ತೊಂದರೆ ಬಂದಿದ್ದು ನನಗೆ ಗೊತ್ತಿಲ್ಲ’ ಎನ್ನುವ ಅವರು, ‘ಈ ಸಿನಿಮಾ ಬಗ್ಗೆ ತುಂಬ ಹಿಂದೆಯೇ ಚಿತ್ರತಂಡ ನನ್ನನ್ನು ಸಂಪರ್ಕಿಸಿತ್ತು. ಆದರೆ ಆಗ ನಾನು ಹಿಂದಿ ಚಿತ್ರವೊಂದರಲ್ಲಿ ಬ್ಯುಸಿ ಇದ್ದೆ. ಆದ್ದರಿಂದ ನನಗೆ ನಟಿಸಲು ಸಾಧ್ಯವಾಗಲಿಲ್ಲ. ಈಗ ಚಿತ್ರೀಕರಣ ಮುಂದೂಡಿದ್ದೇವೆ. ನಟಿಸಲು ಸಾಧ್ಯವೇ ಎಂದು ಕೇಳಿದರು. ನನಗೆ ಕಥೆ ಕೇಳಿದಾಗಲೇ ತುಂಬ ಇಷ್ಟವಾಗಿತ್ತು. ಆದ್ದರಿಂದ ಖುಷಿಯಿಂದಲೇ ಒಪ್ಪಿಕೊಂಡೆ’ ಎಂದು ಐಂದ್ರಿತಾ ಪಾಠ ಒಪ್ಪಿಸುತ್ತಾರೆ.

ಅವರು ಈ ಚಿತ್ರ ಒಪ್ಪಿಕೊಳ್ಳಲು ಇಡೀ ತಂಡ ಅವರಿಗೆ ತುಂಬ ಪರಿಚಿತ ಎಂಬುದು ಒಂದು ಕಾರಣವಾದರೆ, ಪಾತ್ರದ ವಿಭಿನ್ನತೆ ಇನ್ನೊಂದು ಕಾರಣ.

‘ಗರುಡ’ದಲ್ಲಿ ಐಂದ್ರಿತಾ ‘ಹಿಪ್ಪಿ’ ಗೆಟಪ್‌ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅದಕ್ಕಾಗಿ ಅವರು ವಿಶೇಷ ಸಿದ್ಧತೆಯನ್ನೂ ನಡೆಸಿದ್ದಾರೆ. ಈ ವಿಭಿನ್ನ ಪಾತ್ರದ ಕುರಿತು ಅವರಿಗೆ ಸಾಕಷ್ಟು ನಿರೀಕ್ಷೆಗಳಿವೆ.

‘ಗರುಡದಲ್ಲಿ ನಾನು ಹಿಪ್ಪಿ ಥರದ ವಿಶಿಷ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ತುಂಬ ಬಬ್ಲಿ ಪಾತ್ರ. ಹಾಗೆಯೇ ರಂಗಾಯಣ ರಘು ಅವರ ಜತೆಗೇ ತುಂಬ ದೃಶ್ಯಗಳಲ್ಲಿ ತೆರೆ ಹಂಚಿಕೊಳ್ಳಲಿದ್ದೇನೆ. ‘ಜಂಗ್ಲಿ’ ಸಿನಿಮಾದ ನಂತರ ಮತ್ತೆ ಹಾಸ್ಯ ದೃಶ್ಯಗಳಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದೇವೆ’ ಎಂದು ವಿವರಿಸುವ ಐಂದ್ರಿತಾ, ಈ ಪಾತ್ರಕ್ಕಾಗಿ ತಮ್ಮ ಕೇಶ ವಿನ್ಯಾಸವನ್ನೂ ಪೂರ್ತಿಯಾಗಿ ಬದಲಿಸಿಕೊಳ್ಳಲಿದ್ದಾರೆ.

‘ಪಾತ್ರದ ಸ್ವಭಾವಕ್ಕೆ ಅನುಗುಣವಾಗಿ ನನ್ನ ಕೇಶವಿನ್ಯಾಸ ಬದಲಾಯಿಸಿಕೊಳ್ಳುತ್ತಿದ್ದೇನೆ. ಹಾಗೆಯೇ ಕಾಸ್ಟ್ಯೂಮ್‌ ಕೂಡ ವಿಶಿಷ್ಟವಾಗಿಯೇ ಇರುತ್ತದೆ. ಬೋಹೊ ಚೀಕ್‌ ಸ್ಟೈಲ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಕನ್ನಡ ಚಿತ್ರರಂಗದಲ್ಲಿಯೇ ಮೊದಲ ಬಾರಿಗೆ ಈ ಸ್ಟೈಲ್‌ ಬಳಕೆಯಾಗುತ್ತಿದೆ’ ಎಂದು ಖುಷಿಯಿಂದ ಹೇಳಿಕೊಳ್ಳುತ್ತಾರೆ.

ಹೊಸಬರ ತಂಡದ ಜತೆಗೆ ಕೆಲಸ ಮಾಡುವುದೂ ಅವರಿಗೆ ಇಷ್ಟವೇ ಅಂತೆ. 

ದೀಪಾ ಸನ್ನಿಧಿ ‘ಗರುಡ’ ಸವಾರಿಯಿಂದ ತಪ್ಪಿಸಿಕೊಳ್ಳಲು ಇರುವ ಅಸಲಿ ಕಾರಣ ಏನು ಎಂಬುದು ಅವರಿಗಷ್ಟೇ ಗೊತ್ತಿರುವ ಸತ್ಯ. ಆದರೆ ಕಳಚಿಕೊಂಡ ಗರುಡನ ರೆಕ್ಕೆಯನ್ನು ಮತ್ತೆ ಕಟ್ಟಿ ಹಾರಾಟಕ್ಕೆ ಸಿದ್ಧರಾಗಿರುವ ಐಂದ್ರಿತಾ ಅಂತೂ ಈ ಅವಕಾಶ ತಮಗೆ ದೊರೆತಿದ್ದಕ್ಕೆ ಖುಷಿಗೊಂಡಿದ್ದಾರೆ. ಇಂದಿನಿಂದ (ಸೋಮವಾರ) ಗೋವಾದಲ್ಲಿ ನಡೆಯುತ್ತಿರುವ ಚಿತ್ರೀಕರಣದಲ್ಲಿ ಭಾಗಿಯಾಗಲು ಕಾತರದಿಂದ ಕಾಯುತ್ತಿದ್ದಾರೆ.

ಬದಲಾದ ರೆಕ್ಕೆಯಲ್ಲಿ ‘ಗರುಡ’ ಯಾವ ಎಗ್ಗಿಲ್ಲದೇ ಹಾರಲು ಸಿದ್ಧನಾಗಿದ್ದಾನೆ ಎಂಬುದಷ್ಟೇ ಸದ್ಯದ ಸತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT