ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನವರಾದ ಲಕ್ಷ್ಮಣ್, 1984ರಲ್ಲಿ ಸಿವಿಲ್ ಎಂಜಿನಿಯರಿಂಗ್ ಪದವಿ ಮುಗಿಸಿ ಲೋಕೋಪಯೋಗಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿ ಕೆಲಸಕ್ಕೆ ಸೇರಿದರು. ಬಳಿಕ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕ ಕೃಷಿ ಎಂಜಿನಿಯರ್ ಆಗಿ ಕೆಲ ಕಾಲ ಕಾರ್ಯನಿರ್ವಹಿಸಿದರು. 2015ರ ಡಿಸೆಂಬರ್ನಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಕೆಎಸ್ಪಿಸಿಬಿ) ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು.
ಬೆಳ್ಳಂದೂರು ಕೆರೆಯ ಸುತ್ತಮುತ್ತಲಿನ ಕೈಗಾರಿಕೆಗಳನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಿ ಕೆರೆಯ ಪುನಶ್ಚೇತನಕ್ಕೆ ಕ್ರಮಕೈಗೊಳ್ಳಬೇಕು ಎಂದು ಏಪ್ರಿಲ್ 18ರಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್ಜಿಟಿ) ನ್ಯಾಯಪೀಠ ನಿರ್ದೇಶಿಸಿತ್ತು. ಆ ನಂತರದ ಬೆಳವಣಿಗೆಗಳ ಕುರಿತು ಲಕ್ಷ್ಮಣ್, ‘ಪ್ರಜಾವಾಣಿ’ ಜತೆ ಮಾತನಾಡಿದ್ದಾರೆ.
* ಎನ್ಜಿಟಿ ತರಾಟೆ ತೆಗೆದುಕೊಂಡ ನಂತರ ಕೆಎಸ್ಪಿಸಿಬಿಗೆ ಚುರುಕು ಮುಟ್ಟಿದೆಯೇ?
ನಾನು ಅಧಿಕಾರ ವಹಿಸಿಕೊಂಡ ನಂತರ ಮಾಡಿದ ಮೊದಲ ಕೆಲಸ ಬೆಳ್ಳಂದೂರು ಕೆರೆ ಪರಿಶೀಲನೆ. ಆಗಿನಿಂದಲೇ ಕೆರೆ ಪುನಶ್ಚೇತನದ ಕುರಿತು ಅನೇಕ ಸಭೆ ನಡೆಸಿದ್ದೇನೆ. ಹಂತ ಹಂತವಾಗಿ ಅದನ್ನು ಕಾರ್ಯರೂಪಗೊಳಿಸಲಾಗುತ್ತಿದೆ. ಎನ್ಜಿಟಿ ಆದೇಶ ಬರುವ ಆರು ತಿಂಗಳ ಮೊದಲೇ ಬೆಳ್ಳಂದೂರು ಕೆರೆಯ ಜಲಾನಯನ ಪ್ರದೇಶದಲ್ಲಿರುವ ಅನೇಕ ಕೈಗಾರಿಕೆಗಳಿಗೆ ಭೇಟಿ ನೀಡಿದ ಮಂಡಳಿಯ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ನಿಯಮ ಬಾಹಿರವಾಗಿ ತ್ಯಾಜ್ಯ ನೀರನ್ನು ಕೆರೆಗೆ ಹರಿಸುತ್ತಿದ್ದ ಕೈಗಾರಿಕೆಗಳಿಗೆ ನೋಟಿಸ್ ನೀಡಲಾಗಿದೆ. ಇಲ್ಲದಿದ್ದರೆ ಆದೇಶ ಬಂದ ಕೇವಲ ಒಂದು ತಿಂಗಳಲ್ಲಿ 488 ಕೈಗಾರಿಕೆಗಳ ಪರಿಶೀಲನೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ.
* ನಿಯಮಿತವಾಗಿ ಪರಿಶೀಲನೆ ನಡೆಸಿದರೂ ಕೆರೆಗಳು ಮಾತ್ರ ಮಾಲಿನ್ಯ ಮುಕ್ತವಾಗಿಲ್ಲವಲ್ಲ?
ಒಳಚರಂಡಿ ಮೂಲಕ ತ್ಯಾಜ್ಯ ಸೇರುತ್ತಿರುವುದೇ ಕೆರೆಗಳ ಮಾಲಿನ್ಯಕ್ಕೆ ಮೂಲ ಕಾರಣ. ಇದರಲ್ಲಿ ಕೈಗಾರಿಕೆಗಳ ಪಾತ್ರವೂ ಇದೆ. ಆದರೆ, ಹೆಚ್ಚಿನ ಕೊಡುಗೆ ನೀಡುತ್ತಿರುವುದು ನಗರದ ಚರಂಡಿಗಳು. ಬಹಳ ಹಿಂದಿನಿಂದಲೂ ಚರಂಡಿಯ ತ್ಯಾಜ್ಯವನ್ನು ರಾಜಕಾಲುವೆ, ನಾಲೆಗಳಲ್ಲಿ ಸುರಿಯುವ ಕೆಟ್ಟ ಚಾಳಿ ನಮ್ಮಲ್ಲಿ ಮೈಗೂಡಿದೆ. ಮಳೆ ಬಂದಾಗ ಅದು ನೇರವಾಗಿ ಕೆರೆಗೆ ಹೋಗಿ ಸೇರುತ್ತದೆ.
ಸ್ಥಳೀಯ ಸಂಸ್ಥೆಗಳು ರಾಜಕಾಲುವೆಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವ, ಹೂಳು ತೆಗೆಯುವ, ಒತ್ತುವರಿ ತೆರವುಗೊಳಿಸುವ ಕೆಲಸ ಮಾಡಿದ್ದರೆ ಕೆರೆಗಳು ಈ ಸ್ಥಿತಿಗೆ ಹೋಗುತ್ತಿರಲಿಲ್ಲ. ಮಂಡಳಿ ಎಚ್ಚರಿಕೆ ನೀಡಿದ ಬಳಿಕ ಬಹಳಷ್ಟು ಕೈಗಾರಿಕೆಗಳು ತ್ಯಾಜ್ಯ ನೀರು ಸಂಸ್ಕರಣಾ ಘಟಕವನ್ನು (ಎಸ್ಟಿಪಿ) ಅಳವಡಿಸಿಕೊಂಡಿವೆ. ಕೇವಲ ಮಾಲಿನ್ಯ ನಿಯಂತ್ರಣ ಮಂಡಳಿಯಷ್ಟೇ ಕೆರೆಗಳ ಸ್ವಚ್ಛತೆಗೆ ಕೆಲಸ ಮಾಡಿದರೆ ಉದ್ದೇಶ ಸಾಕಾರಗೊಳ್ಳುವುದಿಲ್ಲ. ಇದಕ್ಕೆ ಎಲ್ಲರ ಸಹಭಾಗಿತ್ವವೂ ಅಗತ್ಯ.
* ಬೆಂಗಳೂರಿನಲ್ಲಿರುವ ಬಟ್ಟೆಗೆ ಬಣ್ಣ ಹಾಕುವ ಘಟಕಗಳ ಮಾಲೀಕರಿಗೆ ಕೆಎಸ್ಪಿಸಿಬಿ ಅನುಮತಿ ಪಡೆಯಬೇಕು ಎಂಬುದೇ ತಿಳಿದಿಲ್ಲ. ಇದು ನಿಮ್ಮ ಲೋಪ ಅಲ್ಲವೇ?
ನಮ್ಮ ಅಧಿಕಾರಿಗಳಿಂದಲೂ ಲೋಪ ಆಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪರವಾನಗಿ ನೀಡಿರುವ ಕೈಗಾರಿಕೆಗಳು ಹಾಗೂ ನಮ್ಮಲ್ಲಿ ಅನುಮತಿ ಪಡೆದ ಕೈಗಾರಿಕೆಗಳ ಪಟ್ಟಿಯನ್ನು ನಿಯಮಿತವಾಗಿ ತುಲನೆ ಮಾಡುವ ಕೆಲಸ ಆಗಬೇಕಿತ್ತು. ಆ ಕೆಲಸ ಸರಿಯಾಗಿ ನಡೆದಿಲ್ಲ. ಕರ್ತವ್ಯ ಲೋಪಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡಿದ್ದೇವೆ. ತಮಿಳುನಾಡಿನಲ್ಲಿ ನಿಷೇಧ ಹೇರಿದ ಬಳಿಕ ಕರ್ನಾಟಕಕ್ಕೆ ಬಂದು ನೆಲೆಯೂರಿರುವ ಬಟ್ಟೆಗೆ ಬಣ್ಣ ಹಾಕುವ ಘಟಕಗಳ ಪರಿಶೀಲನೆ ನಡೆಸಿ, ಅನಧಿಕೃತವಾಗಿ ನಡೆಯುತ್ತಿದ್ದ 32 ಘಟಕಗಳಿಗೆ ಬೀಗ ಹಾಕಿಸಿದ್ದೇವೆ. ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸಿ ಅನೇಕ ಕೈಗಾರಿಕೆಗಳನ್ನು ಮುಚ್ಚಿಸಿದ್ದೇವೆ.
* ಕೆಎಸ್ಪಿಸಿಬಿಗೆ ಪರಿಸರಕ್ಕಿಂತ ಕೈಗಾರಿಕೆಗಳ ಮೇಲೆ ಹೆಚ್ಚು ಒಲವಿದೆ ಎನ್ನುವ ಆರೋಪ ಇದೆಯಲ್ಲಾ?
ರಾಜ್ಯದ ಆರ್ಥಿಕ ಸ್ಥಿತಿ ಸುಧಾರಣೆ ಆಗಬೇಕೆಂದರೆ ಕೈಗಾರಿಕೀಕರಣವನ್ನೂ ನಾವು ಬೆಂಬಲಿಸಬೇಕು. ಹಾಗಂತ ಪರಿಸರ ಸಂರಕ್ಷಣೆಯಾಗಬೇಕಾದರೆ ಕೈಗಾರಿಕೆಗಳನ್ನು ಕಡೆಗಣಿಸಬೇಕು ಎಂಬುದೂ ಸರಿಯಲ್ಲ. ಎಸ್ಟಿಪಿ ಪರವಾನಗಿ ನವೀಕರಿಸುವ ಅವಧಿಯನ್ನು ಎರಡು ವರ್ಷದಿಂದ ಐದು ವರ್ಷಕ್ಕೆ ವಿಸ್ತರಣೆ, ಆನ್ಲೈನ್ ಮೂಲಕವೇ ಈ ಪ್ರಕ್ರಿಯೆ ಪೂರ್ಣಗೊಳಿಸಲು ಅವಕಾಶ ನೀಡುವುದು ಸೇರಿ ಕೈಗಾರಿಕೆಗಳ ಸ್ನೇಹಿಯಾಗಿಯೂ ಕೆಎಸ್ಪಿಸಿಬಿ ಕೆಲಸ ಮಾಡಬೇಕಾಗುತ್ತದೆ. ಹಾಗೆಯೇ ನಿಯಮ ಮೀರುವ ಕೈಗಾರಿಕೆಗಳ ವಿರುದ್ಧ ಕಠಿಣ ಕ್ರಮಗಳನ್ನೂ ಕೈಗೊಂಡಿದ್ದೇವೆ.
* ಕೆಎಸ್ಪಿಸಿಬಿ ಅಧಿಕಾರ ನೋಟಿಸ್ ನೀಡುವುದಕ್ಕಷ್ಟೇ ಸೀಮಿತವೇ?
ನೋಟಿಸ್ ನೀಡುವುದು ಮೊದಲ ಪ್ರಕ್ರಿಯೆ ಅಷ್ಟೇ. ನಿಯಮ ಉಲ್ಲಂಘನೆ ಮಾಡಿರುವುದು ತಿಳಿದ ತಕ್ಷಣ ಅವರಿಗೆ ಆ ಬಗ್ಗೆ ಮಾಹಿತಿ ನೀಡಿ, ಮೊದಲ ಅವಕಾಶ ನೀಡುತ್ತೇವೆ. ಎರಡನೇ ಬಾರಿ ಎಚ್ಚರಿಕೆ ನೀಡುತ್ತೇವೆ. ಅದಕ್ಕೂ ಜಗ್ಗಲಿಲ್ಲ ಎಂದರೆ ನೋಟಿಸ್ ನೀಡುತ್ತೇವೆ. ಇವೆಲ್ಲದಕ್ಕೂ ಬಗ್ಗದಿದ್ದಾಗ ಕೊನೆಯ ಹಂತವಾಗಿ ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ಕೇವಲ ಖಾಸಗಿ ಕೈಗಾರಿಕೆಗಳಷ್ಟೆ ಅಲ್ಲ, ನಿಯಮ ಪಾಲಿಸದ ನಗರ ಸ್ಥಳೀಯ ಸಂಸ್ಥೆ ಅಧಿಕಾರಿಗಳ ವಿರುದ್ಧವೂ ಕ್ರಮಕೈಗೊಂಡಿದ್ದೇವೆ. ಈಗಾಗಲೇ 35 ನಗರ ಸ್ಥಳೀಯ ಸಂಸ್ಥೆಗಳ ಮುಖ್ಯಸ್ಥರ ವಿರುದ್ಧ ಕ್ರಿಮಿನಲ್್ ಪ್ರಕರಣ ದಾಖಲಿಸಿದ್ದೇವೆ. ಕೆಲವರು ಶಿಕ್ಷೆಯನ್ನೂ ಅನುಭವಿಸಿದ್ದಾರೆ.