ಮೈಸೂರು: ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಅವರು ಈಚೆಗೆ ರಾಷ್ಟ್ರೀಯ ಹೆದ್ದಾರಿ ವಿಚಾರ ಕುರಿತು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುವಾಗ 17+9 ಎಷ್ಟು ಎಂದು ಪಕ್ಕದಲ್ಲಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೇಳಿದರು.
26 ಎಂದು ಉತ್ತರಿಸಿದ ಸಿದ್ದರಾಮಯ್ಯ, ‘ನೀನು ಗಣಿತದಲ್ಲಿ ತುಂಬಾ ವೀಕು ಬಿಡಯ್ಯ. ಲೆಕ್ಕ ಕಲಿತುಕೊಳ್ಳಲಿ ಎಂದು ಜಿಎಸ್ಟಿ ಸಭೆಗೆ ಕಳುಹಿಸುತ್ತಾ ಇದ್ದೇನೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು. ಆಗ ಪತ್ರಕರ್ತರೊಬ್ಬರು, ‘ಹೀಗಾಗಿಯೇ ನೀವು ಮಹದೇವಪ್ಪ ಅವರನ್ನು ಫೈನಾನ್ಸ್ ಮಿನಿಸ್ಟರ್ ಮಾಡಿಲ್ಲ’ ಎಂದುಬಿಟ್ಟರು.
‘ಹೌದೌದು ನಾನು ಕೂಡ ಫೈನಾನ್ಸ್ ಬಗ್ಗೆ ಕಲಿಯುತ್ತಿದ್ದೇನೆ’ ಎಂದು ಸಿದ್ದರಾಮಯ್ಯ ಆಪ್ತರೂ ಆಗಿರುವ ಮಹದೇವಪ್ಪ ಹೇಳಿದರು.
‘ಮಹದೇವಪ್ಪನವರು ಎಂಬಿಬಿಎಸ್ ಮಾಡಿದ್ದಾರೆ. ಅದಕ್ಕೆ ಸಿಬಿಝಡ್ ಸಾಕು’ ಎಂದು ಮತ್ತೊಬ್ಬ ಪತ್ರಕರ್ತರು ಕೇಳಿದಾಗ ‘ಅದು ಸರಿನೇ’ ಎಂದು ಮುಖ್ಯಮಂತ್ರಿ ನಗು ಬೀರಿದರು.
‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ವತಿಯಿಂದ ನಿರ್ಮಿಸಿರುವ ಹೊರವರ್ತುಲ ರಸ್ತೆಯ ಸುಮಾರು 26 ಕಿ.ಮೀ ವ್ಯಾಪ್ತಿಯ ನಿರ್ವಹಣೆ ಹಾಗೂ ಅಭಿವೃದ್ಧಿ ಹೊಣೆಯನ್ನು ರಾಷ್ಟ್ರೀಯ ಹೆದ್ದಾರಿ ಸುಪರ್ದಿಗೆ ಒಪ್ಪಿಸುತ್ತಿದ್ದು ಅದಕ್ಕಾಗಿ ₹ 177 ಕೋಟಿ ನೀಡಲಾಗುವುದು’ ಎಂದು ಮಹದೇವಪ್ಪ ಹೇಳಿದರು.