ಕಲಬುರ್ಗಿ: ಪಾತಾಳ ಗಂಗೆ ಯೋಜನೆಯಿಂದ ಆಗುವ ಅಪಾಯಗಳ ಕುರಿತ ಪತ್ರಿಕಾಗೋಷ್ಠಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಸದಸ್ಯ ಎಫ್.ಸಿ. ಚೆಗರೆಡ್ಡಿ ಒಂದು ಪ್ರಶ್ನೆ ಕೇಳಿದರು.
‘ಬಹುತೇಕ ಕಡೆ ನದಿ, ಕೆರೆಗಳು ಬತ್ತಿವೆ. ತಿಂಗಳಿಗೊಮ್ಮೆಯೂ ಕುಡಿಯುವ ನೀರು ಸಿಗದ ಪರಿಸ್ಥಿತಿಯಿದೆ. ಇಷ್ಟೆಲ್ಲ ಸಮಸ್ಯೆಯಿದ್ದರೂ ಬಾಟ್ಲಿ ಮತ್ತು ಕ್ಯಾನ್ ನೀರಿಗೆ ಮಾತ್ರ ಯಾವ ಕೊರತೆಯೂ ಇಲ್ಲ. ಜನರಿಗೆ ನಳದಲ್ಲಿ ಸಿಗದ ನೀರು ಕಂಪೆನಿಯವರಿಗೆ ಹೇಗೆ ಸಿಗುತ್ತೆ?
‘ಹೌದಲ್ಲವೇ... ಯಾವ ಬೇಕರಿಯವರೂ, ಅಥವಾ ಮಳಿಗೆಯವರೂ ನೀರಿನ ಬಾಟ್ಲಿ ಇಲ್ಲವೆಂದು ಯಾವತ್ತೂ ಹೇಳಿಲ್ಲ’ ಎಂದು ಸುದ್ದಿಗಾರರು ಯೋಚಿಸತೊಡಗಿದರು. ಚೆಗರೆಡ್ಡಿಯವರೇ ಮಾತು ಮುಂದುವರೆಸಿ, ‘ನದಿ ಮತ್ತು ಕೆರೆ ಪಕ್ಕದಲ್ಲೇ ನೀರಿನ ಕಂಪೆನಿಯವರಿಗೆ ಕೊಳವೆಬಾವಿ ಕೊರೆದು ನೀರು ಮಾರಲು ಅವಕಾಶ ಇರುವಾಗ, ಜನರಿಗೆ ಹೇಗೆ ನೀರು ಸಿಗುತ್ತೆ’ ಎಂದರು.
ಮರುಕ್ಷಣವೇ ಪತ್ರಕರ್ತರೊಬ್ಬರು ಪಿಸುಗುಟ್ಟಿದರು: ‘ಸರ್ಕಾರಕ್ಕೆ ಗೊತ್ತಾಗದಂತೆ ಕಂಪೆನಿಯವರು ಪಾತಾಳ ಗಂಗೆ ಯೋಜನೆಯ ನೀರನ್ನೂ ಸಹ ಬಾಟ್ಲಿ ಅಥವಾ ಕ್ಯಾನ್ನಲ್ಲಿ ತುಂಬಿಸಿ, ಮಾರಿದರೆ ಏನು ಮಾಡೋದು ಸ್ವಾಮಿ’.